ಗೂಂಡಾ ಕಾಯ್ದೆಯಲ್ಲಿ ಜೈಲಿಗಟ್ಟಿರುವ ಪುನೀತ್ ಕೆರೆಹಳ್ಳಿ: ಹೈಕೋರ್ಟ್ ನಿಂದ ಸರಕಾರ ಮತ್ತು ಪೊಲೀಸ್ ಇಲಾಖೆಗೆ ನೊಟೀಸ್!

ಬೆಂಗಳೂರು (ಆ.24): ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಪುನೀತ್‌ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಸಂಬಂಧ ರಾಜ್ಯ ಸರ್ಕಾರ, ನಗರ ಪೊಲೀಸ್‌ ಆಯುಕ್ತರು ಮತ್ತು ಸಿಸಿಬಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ.

ಗೂಂಡಾ ಕಾಯ್ದೆಯಡಿ ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ(Puneeth kerehalli) ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿ(Habeas Corpus Petition) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಪುನೀತ್‌ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌(Arun shyam) ವಾದ ಮಂಡಿಸಿ, ಅರ್ಜಿದಾರರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅರ್ಜಿದಾರರು ‘ರಾಷ್ಟ್ರ ರಕ್ಷಣಾ ಪಡೆ’ ಸಂಘಟನೆ ಕಟ್ಟಿದೇಶಕ್ಕಾಗಿ ಹೋರಾಡುವ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ದುರುದ್ದೇಶಪೂರ್ವಕವಾಗಿ ಹಲವು ಪ್ರಕರಣ ಹೂಡಿ ಮತ್ತು ರಾಜಕೀಯ ದ್ವೇಷದ ಕಾರಣಕ್ಕೆ ಅರ್ಜಿದಾರರನ್ನು ಆ.11ರಂದು ಗೂಂಡಾ ಕಾಯ್ದೆಯಡಿ ಅಕ್ರಮವಾಗಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್‌ ಆಯುಕ್ತರು ಯಾವುದೇ ವಿವೇಚನೆ ಬಳಸದೆ ಏಕಾಏಕಿ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷೀಯ ನಡೆಯಾಗಿದ್ದು, ಆ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಪುನೀತ್ ಕೆರೆ ಹಳ್ಳಿ ಮೇಲೆ ಕೊಲೆ ಪ್ರಕರಣ ಸೇರಿದಂತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಆರೋಪಗಳಿದ್ದು ಇತ್ತೀಚ್ಚಿಗೆ ಧರ್ಮ ದಂಗಲ್ ನಲ್ಲಿ‌ಈತನ ಹೆಸರು ಮುಂಚೂಣಿಯಲ್ಲಿತ್ತು. ಇದೀಗ ಆತನನ್ನು ಗೂಂಡಾ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

Latest Indian news

Popular Stories