ಹೈದರಾಬಾದ್:
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಿಷನರಿ ಶಾಲೆಯೊಂದಕ್ಕೆ ಗುಂಪೊಂದು ದಾಳಿ ಮಾಡಿ ದಾಂಧಲೆ ನಡೆಸಿರುವ ಕುರಿತು NDTV ವರದಿ ಮಾಡಿದೆ.
ಪ್ರಾಂಶುಪಾಲರು ಧಾರ್ಮಿಕ ಉಡುಪುಗಳನ್ನು ಧರಿಸಿ ಕ್ಯಾಂಪಸ್ಗೆ ಬಂದ ಕೆಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ನಂತರ ಶಾಲೆಗೆ ಬಂದ ಗುಂಪು ಸಂಸ್ಥೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ದೂರಿನ ಮೇರೆಗೆ ಪ್ರಾಂಶುಪಾಲರು ಸೇರಿದಂತೆ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಏನು:
ಹೈದರಾಬಾದ್ನಿಂದ 250 ಕಿಮೀ ದೂರದಲ್ಲಿರುವ ಕನ್ನೆಪಲ್ಲಿ ಗ್ರಾಮದ ಬ್ಲೆಸ್ಡ್ ಮದರ್ ತೆರೇಸಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜೈಮನ್ ಜೋಸೆಫ್ ಅವರು ಎರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳು ಕೇಸರಿ ಉಡುಗೆಯನ್ನು ಧರಿಸಿ ಶಾಲೆಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದಾಗ ಅವರು 21 ದಿನಗಳ ಹನುಮಾನ್ ದೀಕ್ಷಾಚರಣೆಯಲ್ಲಿರುವುದಾಗಿ ಉತ್ತರಿಸಿದರು. ನಂತರ ಪ್ರಾಂಶುಪಾಲರು ತಮ್ಮ ಪೋಷಕರನ್ನು ಶಾಲೆಗೆ ಕರೆತರುವಂತೆ ಹೇಳಿದರು ಇದು ವಿವಾದಕ್ಕೆ ಕಾರಣವಾಯಿತು.
ಯಾರೋ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡು ಪ್ರಾಂಶುಪಾಲರು ಕ್ಯಾಂಪಸ್ನಲ್ಲಿ ಹಿಂದೂ ಉಡುಗೆಯನ್ನು ಅನುಮತಿಸುವುದಿಲ್ಲ ಎಂದು ಹೇಳಿದಾಗ ವಿಷಯ ಉಲ್ಬಣಗೊಂಡಿತು. ಸ್ವಲ್ಪ ಸಮಯದ ನಂತರ ಗುಂಪೊಂದು ಶಾಲೆಯ ಮೇಲೆ ದಾಳಿ ನಡೆಸಿತು. ಕೇಸರಿ ಉಡುಪು ಧರಿಸಿದ ಕೆಲವರ ಗುಂಪು “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗುತ್ತ ದಾಂಧಲೆ ನಡೆಸುವ ವೀಡಿಯೊಗಳು ವೈರಲಾಗಿದೆ. ವೀಡಿಯೋ ದಲ್ಲಿ ಶಿಕ್ಷಕಿಯೊಬ್ಬರು ಕೈಗಳನ್ನು ಮುಗಿದು ದಾಂಧಲೆ ಶಿಕ್ಷಕರು ನಿಲ್ಲಿಸುವಂತೆ ಒತ್ತಾಯಿಸುವ ದೃಶ್ಯ ಕಂಡು ಬಂದಿದ್ದು, ವೀಡಿಯೋದಲ್ಲಿ ಕಿಟಕಿಯ ಗಾಜುಗಳನ್ನು ಒಡೆದುಹಾಕುವ ದೃಶ್ಯ ಕೂಡ ಇದೆ. ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿಭಟನಾಕಾರರನ್ನು ಶಾಲೆಯ ಕಾರಿಡಾರ್ಗಳಿಂದ ಹೊರ ತಳ್ಳುವುದು ಕೂಡ ವೀಡಿಯೋದಲ್ಲಿ ಸೆರೆಯಾಗಿದೆ. ಕ್ಯಾಂಪಸ್ನಲ್ಲಿರುವ ಮದರ್ ತೆರೇಸಾ ಅವರ ಪ್ರತಿಮೆಯ ಮೇಲೆ ಗುಂಪೊಂದು ಕಲ್ಲು ಎಸೆಯುತ್ತಿರುವುದನ್ನು ವೀಡಿಯೋ ಕೂಡ ಸೆರೆಯಾಗಿದೆ.
ಇನ್ನು ಪ್ರಾಂಶುಪಾಲ ಜೊಸೇಫ್ ಅವರಿಗೆ ಬಲವಂತವಾಗಿ ತಿಲಕ ಹಚ್ಚಿ ಕ್ಷಮೆಯಾಚಿಸಲು ಒತ್ತಾಯಿಸಲಾಗಿದೆ ಎಂದು NDTV ತನ್ನ ವರದಿಯಲ್ಲಿ ಉಲ್ಲೇಖಿಸಿದೆ.