ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಶ್ರೀರಾಮ ಜಾದೂಗಾರ ಅಸಮಾಧಾನ

ಕಾರವಾರ: ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನ ಬಳಸಿಕೊಳ್ಳಬೇಡಿ ಎಂದು ಹಿಂದೂ ಕಾರ್ಯಕರ್ತ ಶ್ರೀರಾಮ್ ಜಾದೂಗಾರ್ ಹೇಳಿದರು.

ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಸುಮಾರು 95 ಯುವಕರ ಮೇಲೆ‌ ಕೇಸ್ ಹಾಕಲಾಗಿತ್ತು. ಇನ್ನೂ ಕೋರ್ಟ್ ಕಚೇರಿ ಎಂದು ತಿರುಗಾಡುತ್ತಿದ್ದೇವೆ. ಆದರೆ ಯಾವ ಬಿಜೆಪಿ ಮುಖಂಡರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಪರೇಶ್ ಮೇಸ್ತಾ ಪ್ರಕರಣ ಇವರಿಗೆ ನೆನಪಿಗೆ ಬರುತ್ತದೆ. ಕಾಗೇರಿಯವರು ಆ ಸಂದರ್ಭದಲ್ಲಿ ನಮಗೆ ಏನು ಸಹಾಯ ಮಾಡಿದ್ದಾರೆ ಎಂದು ತಿಳಿಸಲಿ,. ರಾಜಕೀಯ ಬಳಕೆಗೆ ನಮ್ಮನ್ನ ಬಳಕೆ ಮಾಡಿಕೊಳ್ಳಲು ಹೊರಟಿರುವುದು ನಮಗ ಅತೀವ ಬೇಸರ ತರಿಸಿದೆ ಎಂದರು.

ಪರೇಶ್ ಪ್ರಕರಣದ ಸಂದರ್ಭ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕಾಗೇರಿಯವರು ಹೇಳುತ್ತಾರೆ. ಹಾಗಿದ್ದರೆ ಕಾಗೇರಿಯವರು ಅಂದು ತನಿಖೆ ಸರಿಯಾಗಿ ಮಾಡುವಂತೆ ಎಷ್ಟು ಪತ್ರ ಬರೆದಿದ್ದಾರೆ? ಯಾರೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ? ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೇಸು ಹಾಕಿಸಿಕೊಂಡ ನಂತರ ನಮ್ಮ ಸಹಾಯಕ್ಕೆ ಯಾವ ಬಿಜೆಪಿಗರು ಬರದೇ ಪರದಾಡಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಕಂಡವರ ಮನೆಯ ಮಕ್ಕಳನ್ನ ಬಾವಿಗೆ ತಳ್ಳುವ ಕೆಲಸ ಕಾಗೇರಿಯವರು ಮಾಡಬಾರದು ಎಂದರು.

ಕಳೆದ ಬಾರಿ ಸ್ಪೀಕರ್ ಆಗಿದ್ದಾಗ ನಮ್ಮ ಪರ ಕಾಗೇರಿಯವರು ಏನು ಮಾಡಿದ್ದಾರೆ? ಏಳು ವರ್ಷದಿಂದ ನಾವು ಕೋರ್ಟ್ ಗೆ ಓಡಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತರಾದ ನಾವು ಸದ್ಯ ನೆಮ್ಮದಿಯಾಗಿ ಇದ್ದೇವೆ. ಚುನಾವಣೆಗಾಗಿ ಮತ್ತೆ ನಮ್ಮನ್ನ ಎಳೆದು ತಂದು ಕಂಡವರ ಮನೆಯ ಬಾವಿಗೆ ದಬ್ಬಬೇಡಿ. ಪರೇಶ್ ಮೇಸ್ತಾ ಹತ್ಯೆಯಾದಾಗ ನಾವು ಗಲಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಕೇಸು ಹಾಕಿದ್ದರು. ನಂತರ ಸಿಬಿಐಗೆ ವಹಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ‌ಸರ್ಕಾರ ಇದ್ದರೂ ನ್ಯಾಯ ಕೊಡಿಸಲಾಗಿಲ್ಲ. ಈಗ ಚುನಾವಣೆಗಾಗಿ, ತಮ್ಮ ತೆವಲಿಗಾಗಿ ನಮ್ಮನ್ನ ಬಳಸಿಕೊಳ್ಳಲು ಹೊರಟಿದ್ದಾರೆ ಎಂದರು.

ದೊಡ್ಡ ನಾಯಕರು ಗಲಾಟೆ ಆದಾಗ ಕಾರಿನಲ್ಲಿ ಕುಳಿತು ನಾಪತ್ತೆಯಾದರು. ಲಾಠಿ ಚಾರ್ಜ್ ಎಂದಾಗ ಹೊಡೆತ ತಿಂದವರು ಹಿಂದುಳಿದ ವರ್ಗದ ನಾವುಗಳು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ 2020ರಲ್ಲಿ ಕಲಂ 107 ಅಡಿ ನಮ್ಮ‌ ಮೇಲೆ ದೂರು ದಾಖಲಿಸಲಾಗಿದೆ. ಶಾಸಕ ದಿನಕರ ಶೆಟ್ಟಿ ಈವರೆಗೆ ನಮಗೆ ಸ್ಪಂದಿಸಿಲ್ಲ ಎಂದರು.

ಇನ್ನೋರ್ವ ನಿತ್ಯಾನಂದ ಪಾಲೇಕರ್ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗುವ ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಿ. ದ್ವೇಷ ಮೂಡಿಸುವಂತಹ, ಪರಸ್ಪರ ಜಗಳ ಮಾಡುವಂತಹ ರಾಜಕೀಯ ಮಾಡಬೇಡಿ. ಕೋಮು ಗಲಭೆ ಕಿಚ್ಚು ಹಚ್ಚಿಸುವ ಬದಲು ಅಭಿವೃದ್ಧಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿರು.

ಪತ್ರಿಕಾಗೋಷ್ಟಿಯಲ್ಲಿ ವಿಕ್ರಂ, ರಾಮ್, ನಿತ್ಯಾನಂದ ಪಾಲೇಕರ್, ನಾಗರಾಜ, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

——————————-
“ಪರೇಶ್ ಮೇಸ್ತಾ ಪ್ರಕರಣದಲ್ಲಿ ದೂರು ದಾಖಲಾಗಿ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ‌. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಮಾಡಿಸಲೂ ಆಗುತ್ತಿಲ್ಲ. ನಮ್ಮ ಕುಟುಂಬಗಳ ಕಣ್ಣೀರು ಕೇಳುವವರು ಇಲ್ಲದಾಗಿದೆ. ಇದಕ್ಕೆಲ್ಲ ಹೊಣೆ ಯಾರು? ”
– ಶ್ರೀರಾಮ್ ಜಾದೂಗಾರ, ಹೊನ್ನಾವರ

Latest Indian news

Popular Stories