ಮಡಿಕೇರಿ ಜೂ.೩ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗ ಸೇರಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೆ.ಎಂ.ಬಿದ್ದಪ್ಪ ಎಂಬವರೇ ಹಲ್ಲೆಗೊಳಗಾದವರಾಗಿದ್ದು, ಹಲ್ಲೆ ನಡೆಸಿದ ಮಂಕ್ಯ ಗ್ರಾಮದ ಎಂ.ಕೆ.ಪೂವಯ್ಯಹಾಗೂ ಅವರ ಪುತ್ರ ಗಿರೀಶ್ ಎಂಬವರನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮೇಯಲೆಂದು ಕಟ್ಟಿ ಹಾಕಿದ್ದ, ಬಿದ್ದಪ್ಪ ಅವರಿಗೆ ಸೇರಿದ ಕೋಣವೊಂದು ಹಗ್ಗ ಬಿಚ್ಚಿಕೊಂಡು ಹೋಗಿ ಪೂವಯ್ಯ ಅವರ ಕೋಣಕ್ಕೆ ಗುದ್ದಿತೆನ್ನಲಾಗಿದ್ದು, ಇದನ್ನೇ ನೆಪ ಮಾಡಿಕೊಂಡ ಪೂವಯ್ಯ ಮುದ್ದಪ್ಪ ಅವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿದಲ್ಲದೆ, ಕತ್ತಿಯ ಹಿಡಿಯಿಂದ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಇದೇ ಸಂದರ್ಭ ಸ್ಥಳಕ್ಕಾಗಮಿಸಿದ ಪೂವಯ್ಯ ಅವರ ಪುತ್ರ ಗಿರೀಶ್, ಬಿದ್ದಪ್ಪ ಅವರ ಕತ್ತು ಹಿಡಿದ ಕೆಳಕ್ಕೆ ಬೀಳಿಸಿದ್ದಲ್ಲದೆ, ಕಾಲಿನಿಂದ ಒದ್ದು, ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಸಂದರ್ಭ ಸುತ್ತಮುತ್ತ ಇದ್ದವರು ಬಂದು ಜಗಳವನ್ನು ಬಿಡಿಸಿದ್ದು, ಗಾಯಾಳು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಫೋಟೋ :: ಕ್ರೆöÊಂ