ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಯನೂರು ಮಂಜುನಾಥ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಚಂದ್ರಪ್ಪ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದರು.
ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯಿಂದ ಜೆಡಿಎಸ್ಗೆ ಜಿಗಿದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆಯನೂರು ಅಲ್ಲಿ ಕೇವಲ 8863 ಮತ ಪಡೆದು ದೊಡ್ಡ ಸೋಲು ಕಂಡಿದ್ದರು. ಬಳಿಕ ರಾಜಕೀಯ ಮರುಹುಟ್ಟು ಪಡೆಯಲು ಅವರು ಕಾಂಗ್ರೆಸ್ ಸೇರಲು ಬಯಸಿದ್ದರು. ಸ್ಥಳೀಯ ಕಾಂಗ್ರೆಸಿಗರು ಇವರ ಸೇರ್ಪಡೆ ವಿರೋಧಿಸಿದ್ದರು. ಈ ನಡುವೆಯೂ ಅವರು ಗುರುವಾರ ಕಾಂಗ್ರೆಸ್ ಸೇರಿದರು.
ಈ ಹಿಂದೆ ಲೋಕಸಭೆ ಸದಸ್ಯರೂ ಆಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಎದುರಾಳಿಯಾಗಿ ಕಣಕ್ಕಿಳಿದು ಸದ್ದು ಮಾಡಿದ್ದರು. ಜತೆಗೆ ಬಂಗಾರಪ್ಪ ಬಿಜೆಪಿ ಸೇರಿದಾಗ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಸೋತಿದ್ದರು. ಪುನಃ ಬಿಜೆಪಿಗೆ ಸೇರಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಜನತಾಪಕ್ಷಕ್ಕೂ ಒಮ್ಮೆ ಹೋಗಿಬಂದಿದ್ದರು.