ಉಡುಪಿ: ಸುವರ್ಣ ತ್ರಿಭುಜ ಬೋಟು ಅವಘಡಕ್ಕೆ ಸಂಬಂಧಿಸಿ ಈಗಾಗಲೇ ತನಿಖೆ ನಡೆಸಲಾಗಿದ್ದು, ಇದೀಗ ಇಡೀ ಪ್ರಕರಣವನ್ನು ಮುಚ್ಚಲಾಗಿದೆ. ಐದು ವರ್ಷಗಳ ಹಿಂದೆ ಆಗಿರುವ ಘಟನೆ ಬಗ್ಗೆ ನಾನು ಈಗ ಮಾತನಾಡಿದರೆ ರಾಜಕೀಯ ವಾಗುತ್ತದೆ. ಆ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಪ್ರಕರಣದ ಬಗ್ಗೆ ತನಿಖೆ ಅಗತ್ಯ ಇದ್ದರೆ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಮೀನುಗಾರರು ಮತ್ತು ಸಾರ್ವಜನಿಕರಿಗೆ ಕಡಲ್ಕೊರೆತದಿಂದ ಆಗುತ್ತಿರುವ ಸಮಸ್ಯೆಗಳ ಕುರಿತ ಪೂರ್ವಭಾವಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.
ಈ ಬಾರಿ ಇಡೀ ರಾಜ್ಯದಲ್ಲಿ ಅಗತ್ಯ ಇರುವ ಮೀನುಗಾರರಿಗೆ ಅನುಕೂಲವಾಗುವಂತೆ ಮನೆ ಕೊಡುವ ಪ್ರಯತ್ನ ಮಾಡ ಲಾಗುವುದು ಎಂದರು.
ಮಳೆಗಾಲ ಆರಂಭವಾಗಿರುವುದರಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮುದ್ರ ಕೊರತೆ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತ ಕೂಡ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಅದೇ ರೀತಿ ಕಡಲ್ಕೊರೆತಕ್ಕೆ ತಡೆಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ. ಮೃತ ಮೀನುಗಾರ ಕುಟುಂಬಗಳಿಗೆ ನೀಡುವ ಸಂಕಷ್ಟ ಪರಿಹಾರ ನಿಧಿಯನ್ನು ಕಳೆದ ಒಂದು ವರ್ಷಗಳಿಂದ ಬಾಕಿ ಇರಿಸಲಾಗಿದ್ದು, ಅದನ್ನು ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಡಲ್ಕೊರೆತ ತಡೆಗೆ ಕಲ್ಲು ಹಾಕಿರುವ ಗುತ್ತಿಗೆದಾರರ ಹಣ ಬಾಕಿ ಇರುವುದ ರಿಂದ ಈ ವರ್ಷ ಯಾರು ಕೂಡ ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿ ಕೂಡ ಕಾಮಗಾರಿ ನಿಂತಿಲ್ಲ. ಎಲ್ಲ ಕಡೆ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ. ಟೆಂಡರ್ ಕರೆದಾಗ ಯಾವುದೇ ಗುತ್ತಿಗೆದಾರರು ಬಾರದೆ ಒಂದೇ ಒಂದು ಕೆಲಸ ನಮ್ಮ ಇಲ್ಲಿ. ಜಿಲ್ಲೆಯಲ್ಲಿ ಒಟ್ಟು 40ಕಿ.ಮೀ. ವ್ಯಾಪ್ತಿಯಲ್ಲಿ ಈ ಬಾರಿ ಕಡಲ್ಕೊರೆತ ಕಂಡುಬಂದಿದೆ ಎಂದರು.
ಉಳ್ಳಾಲದಲ್ಲಿ ಮಾದರಿಯ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಾಮ ಗಾರಿಯನ್ನು ಉಡುಪಿ ಜಿಲ್ಲೆಯ ಮರವಂತೆ ನಾಗಬನ ಹಾಗೂ ಪಡುಬಿದ್ರಿಯ ನಡಿಪಟ್ಣ ಸೇರಿದಂತೆ ನಾಲ್ಕು ಕಡೆ ನಡೆಸಲು ಈಗಾಗಲೇ ಅಂದಾಜು ಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮೀನುಗಾರರಿಗೆ ಅವಶ್ಯಕತೆ ಇದ್ದರೆ ಹಾಗೂ ಪ್ರಯೋಜನ ಆಗುವುದಾದರೆ ಸೀ ಆ್ಯಂಬುಲೆನ್ಸ್ ನಿಯೋಜಿಸುವ ಬಗ್ಗೆ ಯೋಚನೆ ಮಾಡಲಾಗುವುದು. ಗಂಗೊಳ್ಳಿಯಲ್ಲಿ ಕುಸಿದ ಜೆಟ್ಟಿ ಕಾಮಗಾರಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡ ಲಾಗಿದೆ. ಕೂಡಲೇ ಸರಿಪಡಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮರವಂತೆ ಬ್ರೇಕ್ ವಾಟರ್ ಎರಡನೇ ಕಾಮಗಾರಿಗೆ ಸಂಬಂಧಿಸಿದ ಸಿಆರ್ಝೆಡ್ ಕ್ಲಿಯರೆನ್ಸ್ ಮಾಡಲು ನಿರ್ದೇಶನ ನೀಡಲಾಗಿದೆ. ಕೂಡಲೇ ಕ್ಲಿಯರೆನ್ಸ್ ಮಾಡಿ ಕಾಮಗಾರಿಯನ್ನು ಆರಂಭಿಸಲಾಗುವುದು. ಅದಕ್ಕೆ ಟೆಂಡರ್ ಕೂಡ ಆಗಿದೆ. ಯಾವುದೇ ಕಾಮಗಾರಿ ವಿಳಂಬ ಆಗಲು ನಾವು ಬಿಡುವುದಿಲ್ಲ. ಮೀನುಗಾರಿಗೆ ಅನುಕೂಲವಾಗುವ ಎಲ್ಲವವನ್ನು ನಾವು ಮಾಡುತ್ತೇವೆ. ಅವರಿಗೆ ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ಬಂದರುಗಳಲ್ಲಿ ಶೌಚಾಲಯ ಮತ್ತು ಮೀನು ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಮುಂದಿನ ತಿಂಗಳು ಪ್ರತಿಯೊಂದು ಕಡೆಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು