ಉಡುಪಿ ಜಿಲ್ಲೆಯಾದ್ಯಂತ ಹೆಚ್ಚು ವಾಹನ ಸಂಚಾರ ಇರುವ ರಸ್ತೆ ಬದಿಯ ಶಾಲಾ ಕಾಲೇಜುಗಳ ಸೆಕ್ಯುರಿಟಿ ಗಾರ್ಡ್ ಅಥವಾ ಸಿಬ್ಬಂದಿಗೆ ಮಕ್ಕಳನ್ನು ರಸ್ತೆ ದಾಟಿಸುವ ಸೇರಿದಂತೆ ಮೂಲಭೂತ ಟ್ರಾಫಿಕ್ ವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರವನ್ನು ಜೂ.26ರಿಂದ ಹಮ್ಮಿಕೊಳ್ಳಲಾಗುವುದು ಎಂದು ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಬಿಟ್ಟ ಕೂಡಲೇ ರಸ್ತೆ ದಾಟಿಸುವ ಬಗ್ಗೆ, ಸಂಚಾರಿ ನಿಯಮಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು. ಹೆಚ್ಚು ವಾಹನ ಸಂಚಾರ ಇರುವ ರಸ್ತೆಯ ಬದಿಯ ಶಾಲೆ ಮೊದಲ ಆದ್ಯತೆಯಲ್ಲಿ ತರಬೇತಿ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯಾದ್ಯಂತ ಹೆಚ್ಚು ಅಪಘಾತಗಳು ಸಂಭವಿಸುವ ಒಟ್ಟು 19 ಬ್ಲ್ಯಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದ್ದು, ಈ ಸ್ಥಳ ಗಳಲ್ಲಿ ಅಪಘಾತಗಳ ಸಂಖ್ಯೆ ಇಳಿಕೆ ಮಾಡುವ ನಿಟ್ಟಿನಲ್ಲಿ ತಕ್ಷಣದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದರು
ಪೊಲೀಸ್ ಇಲಾಖೆ, ರಸ್ತೆ ಏಜೆನ್ಸಿ ಹಾಗೂ ಆರ್ಟಿಓ ಜಂಟಿಯಾಗಿ ಅಪಘಾತ ಹೆಚ್ಚು ಸಂಭವಿಸುವ ಸ್ಥಳಗಳನ್ನು ಪರಿಶೀಲನೆ ಮಾಡಿ ವೈಜ್ಞಾನಿಕ ತನಿಖಾ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ವಾಹನಗಳ ಮೆಕ್ಯಾನಿಕಲ್ ತಪ್ಪು, ರಸ್ತೆ ನಿರ್ಮಿಸಿದ ಇಂಜಿನಿಯರ್ ತಪ್ಪು ಮತ್ತು ಚಾಲಕನ ತಪ್ಪುಗಳ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಲಾಗುತ್ತದೆ ಎಂದರು.