ಬಿಜೆಪಿಯ ಬಹಿರಂಗ ಚರ್ಚೆ ಅಹ್ವಾನ ಕಾಂಗ್ರೆಸ್‌ನವರು ಸ್ವೀಕರಿಸಿಲ್ಲ: ವಿವೇಕಾನಂದ ಡಬ್ಬಿ

ವಿಜಯಪುರ : ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಶಾಮಿಯಾನ ಹಾಕಿ ಚರ್ಚೆ ನಡೆಸಲು ನಾವು ಅನೇಕ ಬಾರಿ ಆಹ್ವಾನಿಸಿದರೂ ಕಾಂಗ್ರೆಸ್ ಪಕ್ಷ ಆಹ್ವಾನ ಸ್ವೀಕರಿಸಲಿಲ್ಲ, ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ತಾನು ಏನು ಮಾಡಿಲ್ಲ ಎಂಬುದು ಗೊತ್ತಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇವಲ ನಾಲ್ಕು ನಗರಗಳಲ್ಲಿ ಮೆಟ್ರೋ ಸಂಚಾರ ಇತ್ತು, ಆದರೆ ಕೇವಲ 10 ವರ್ಷದ ಆಡಳಿತ ಅವಧಿಯಲ್ಲಿ 20 ನಗರರಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ, ಕಾಂಗ್ರೆಸ್ 70 ವರ್ಷಗಳ ಆಡಳಿತದಲ್ಲಿ 628 ವಿಶ್ವವಿದ್ಯಾಲಯಗಳು ಮಾತ್ರ ಆರಂಭಗೊಂಡವು, ಆದರೆ ಮೋದಜಿ ಅವರು ಕೇವಲ 10 ವರ್ಷಗಳಲ್ಲಿ 1168 ಹೊಸ ವಿಶ್ವವಿದ್ಯಾಲಯ ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕಳೆದ ಏಳು ದಶಕಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಆರೋಗ್ಯ ಸೌಲಭ್ಯ ಕಲ್ಪಿಸುವ ಯಾವ ಮುಂದಾಲೋಚನೆಯೂ ಕಾಂಗ್ರೆಸ್ ಬಳಿ ಇರದಿರುವುದು ದುರ್ದೈವ ಎಂದರು.
ಆದರೆ 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್ ದಾಳಿ ನಡೆಸಿದಾಗ ದಿಟ್ಟ ನಿರ್ಧಾರ ಕೈಗೊಂಡು ಜನರಲ್ಲಿ ಅಭಯ ತುಂಬಿದರು, ಉಚಿತವಾಗಿ ಪ್ರತಿಬಂಧಕ ಲಸಿಕೆ ಹಂಚಿದರು, 20 ಲಕ್ಷ ಕೋಟಿ ರೂ.ಗಳಷ್ಟು ಪ್ಯಾಕೇಜ್ ನೀಡಿದರು ಎಂದರು.
ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾಗತೀಕರಣ ನೀತಿ ಜಾರಿಗೊಂಡಿತು, ಆದರೆ ವಿಷಯದಲ್ಲಿ ಕಾಂಗ್ರೆಸ್ ಕೇವಲ ಆಮದು ಮಾಡುವದಕ್ಕೆ ಮಾತ್ರ ಸೀಮಿತವಾಯಿತು ಹೊರತು ರಫ್ತು ಮಾಡುವುದಕ್ಕೆ ಯಾವ ಯೋಚನೆಯೂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೋದಿಜಿ ಆಡಳಿತದ ಕಾಲಘಟ್ಟದಲ್ಲಿ ಕೌಶಲ್ಯಾಧಾರಿತ ಯೋಜನೆ ಅನ್ವಯ ರಫ್ತುಉದ್ಯಮಕ್ಕೆ ಪ್ರೋತ್ಸಾಹ, ನವೋದ್ಯಮಗಳಿಗೆ ಆದ್ಯತೆ ನೀಡಿದರು ಎಂದು ಡಬ್ಬಿ ವಿವರಿಸಿದರು.
ಧುರೀಣರಾದ ರಾಜೇಶ ತಾವಸೆ, ವಿಜಯ ಜೋಶಿ , ಶ್ರೀಕಾಂತ ಶಿಂಧೆ, ಸಂತೋಷ ವೆಂಕಪ್ಪಗೋಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories