ಮಲ್ಪೆ: ಕೆಳಾರ್ಕಳಬೆಟ್ಟುವಿನ ಆಭರಣ ತಯಾರಿಕಾ ಸಂಸ್ಥೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ನ.25ರಂದು ನಡೆದಿದೆ.
ಕೆಳಾರ್ಕಳಬೆಟ್ಟುವಿನ ಸ್ವರ್ಣೋದ್ಯಮ ಆಭರಣ ತಯಾರಿಕಾ ಸಂಸ್ಥೆಯ ಉಸ್ತುವಾರಿ ದೀಪಕ್ ರಾಮದಾಸ್ ನಾಯಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಸ್ಥೆಯಲ್ಲಿ ವರ್ಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಂಗಲ್ ದೀಪ್ ಮಂಡಲ್ ಎಂಬವರು ಕಳ್ಳತನ ನಡೆದಿರುವ ಬಗ್ಗೆ ದೀಪಕ್ ಅವರಿಗೆ ಮಾಹಿತಿ ನೀಡಿದ್ದರು. ದೀಪಕ್ ರಾಮದಾಸ್ ನಾಯಕ್ ಅವರು ಘಟಕಕ್ಕೆ ಬಂದು ನೋಡಿದಾಗ ಆಭರಣ ತಯಾರಿಕಾ ಸಂಸ್ಥೆಯ ಬೀಗವನ್ನು ಒಡೆದು ಒಳ ನುಗ್ಗಿದ ಕಳ್ಳರು ಆಭರಣ ತಯಾರಿಸಲು ಇಟ್ಟಿದ್ದ ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲಸ್ ಮತ್ತು ಮೇಣದಲ್ಲಿ ಇರಿಸಿದ ಚಿನ್ನ ಸೇರಿ 6,30 ಲಕ್ಷ ಮೌಲ್ಯದ 126 ಗ್ರಾಂ ತೂಕದ ಚಿನ್ನವನ್ನು ಕಳವು ಗೈದಿರುವುದು ಕಂಡು ಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ