ಲಕ್ನೌ, ಮಾರ್ಚ್. 29: ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಉತ್ತರ ಪ್ರದೇಶ ರಾಜಕೀಯದಲ್ಲಿ ಕಿಚ್ಚು ಹಚ್ಚಿದೆ.ಸಾವಿನ ಕುರಿತು ಉತ್ತರ ಪ್ರದೇಶ ಸರ್ಕಾರವು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ನಿರ್ಧರಿಸಿದ್ದು, ಈ ಬಗ್ಗೆ ಘೋಷಿಸಿದೆ. ಮೂವರು ಸದಸ್ಯರ ತಂಡದಿಂದ ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದೆ.
ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ (ಮಾರ್ಚ್ 28) ಉತ್ತರ ಪ್ರದೇಶದ ಬಂದಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಬ್ಬರು ವೈದ್ಯರ ಸಮಿತಿ ಶುಕ್ರವಾರ (ಮಾರ್ಚ್. 29) ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಅದನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಮುಖ್ತಾರ್ ಅನ್ಸಾರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಪುತ್ರ ಉಮರ್ ಅನ್ಸಾರಿಗೆ ಹಸ್ತಾಂತರಿಸಲಾಗುತ್ತದೆ.
ವೈದ್ಯಕೀಯ ಬುಲೆಟಿನ್ ಪ್ರಕಾರ, ಮುಖ್ತಾರ್ ಅನ್ಸಾರಿ ಅವರು ಆರೋಗ್ಯ ಸರಿಯಿಲ್ಲ ಎಂದು ಹೇಳಿದ ನಂತರ “ಪ್ರಜ್ಞಾಹೀನ ಸ್ಥಿತಿಯಲ್ಲಿ” ಜಿಲ್ಲಾ ಕಾರಾಗೃಹದಿಂದ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಒಂಬತ್ತು ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿತು. ಆದರೆ ಅವರು ಹೃದಯಾಘಾತದಿಂದ ನಿಧನರಾದರು ಎಂದು ವೈದ್ಯರು ಹೇಳಿದ್ದರು.
ಇದಕ್ಕೂ ಮುನ್ನ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುಖ್ತಾರ್ ಅನ್ಸಾರಿ ಅವರನ್ನು ಮಂಗಳವಾರ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ತಾರ್ ಅನ್ಸಾರಿ ಕುಟುಂಬವು ಬಂಡಾ ಜೈಲಿನಲ್ಲಿ ಅವನಿಗೆ ನೀಡಿದ ಆಹಾರದಲ್ಲಿ ವಿಷ ಹಾಕಲಾಗುತ್ತಿದೆ ಎಂದು ಆರೋಪಿಸಿದೆ.