ಬಳ್ಳಾರಿ,ಜೂ.02(ಕರ್ನಾಟಕ ವಾರ್ತೆ): ಗ್ರಾಮಾಂತರ ಪ್ರದೇಶದಲ್ಲಿ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಪಡೆದಿರುವ ಅಂತ್ಯೋದಯ ಮತ್ತು ಬಿ.ಪಿ.ಎಲ್ (AAY&PPH) ಪಡಿತರ ಚೀಟಿಗಳನ್ನು ಜೂ.30 ರೊಳಗೆ ಸ್ವಯಂ ಪ್ರೇರಿತವಾಗಿ ಇಲಾಖೆಗೆ ಹಿಂದಿರುಗಿಸಿ, ಇಲ್ಲದಿದ್ದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ದವಾಗಿ ಅಂತ್ಯೋದಯ ಮತ್ತು ಬಿ.ಪಿ.ಎಲ್ (AAY & PHH) ಪಡಿತರ ಚೀಟಿ ಪಡೆದುಕೊಂಡವರು ಸ್ವಯಂ ಪ್ರೇರಿತವಾಗಿ ಆಹಾರ ವಿಭಾಗಕ್ಕೆ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು. ಪಡಿತರ ಚೀಟಿ ವಾಪಸ್ ಕೊಟ್ಟವರಿಗೆ ಎ.ಪಿ.ಎಲ್ (NPHH) ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ತಿಂಗಳ ಅಂತ್ಯದವರೆಗೆ ಗಡುವು ನೀಡಿದ್ದು ಪಡಿತರ ಚೀಟಿಯನ್ನು ಹಿಂದಿರುಗಿಸುವವರಿಗೆ ಯಾವುದೇ ದಂಡ ವಿದಿಸಲಾಗುವುದಿಲ್ಲ, ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಅವದಿಯಲ್ಲಿ ನ್ಯಾಯಬೆಲೆ ಅಂಗಡಿಯಿಂದ ಹಂಚಿಕೆ ಪಡೆದ ಆಹಾರ ಧಾನ್ಯಗಳ ಮುಕ್ತ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಇವರು ಅರ್ಹರಲ್ಲ: ಸರ್ಕಾರಿ ನೌಕರರು, ಅನುದಾನಿತ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮಗಳು, ಸ್ವಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿ ಇರುವವರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಅಷ್ಟೇ ಅಲ್ಲದೆ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಅಂತ್ಯೋದಯ, ಮತ್ತು ಬಿ.ಪಿ.ಎಲ್ (AAY & PHH) ಪಡಿತರ ಕಾರ್ಡು ಹೊಂದಿರುವಂತಿಲ್ಲ.
ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಜಕಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್/ ಮ್ಯಾಕ್ಸಿ ಕ್ಯಾಬ್/ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ಇತರರು ಬಿ.ಪಿ.ಎಲ್ (PHH) ಪಡಿತರ ಚೀಟಿ ಪಡೆಯುಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಆದುದರಿಂದ ಕೂಡಲೇ ಅಂತ್ಯೋದಯ ಮತ್ತು ಬಿ.ಪಿ.ಎಲ್ (AAY & PHH) ಪಡಿತರ ಚೀಟಿಗಳನ್ನು ಜೂ.30 ರೋಳಗಾಗಿ ಹಿಂದಿರುಗಿಸುವಂತೆ ಅವರು ತಿಳಿಸಿದ್ದಾರೆ.