ಬೀದರ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಸೆ.17ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಹೊಂದಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತದ ಗೃಹ ಮಂತ್ರಿಗಳಾಗಿದ್ದಾಗ ಈ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಬಿಡಿಸಿ ನಮ್ಮೆಲ್ಲರಿಗೆ ಸ್ವಾತಂತ್ರ್ಯ ಕೊಡಿಸಿದರು. ಅವರ ಸಾಧನೆ ನೆನಪಾರ್ಥ ದೇಶದಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ದೊಡ್ಡ ಪ್ರತಿಮೆ ನಿರ್ಮಿಸಲಾಗಿದೆ. ಇಂತಹ ಹಲವಾರು ಮಹನೀಯರ ವಿಮೋಚನಾ ಹೋರಾಟದಿಂದಾಗಿ ನಾವೆಲ್ಲರೂ ಸ್ವಾತಂತ್ರ್ಯದ ಗಾಳಿಯನ್ನು ಸೇವನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಈ ಭಾಗದ ವಿಮೋಚನಾ ಹೋರಾಟದಲ್ಲಿ ಜೀವ ತ್ಯಾಗ ಮಾಡಿದಂತಹ ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸೆ.17ರಂದು ಜಿಲ್ಲೆಯಲ್ಲಿ ಲಸೀಕಾರಣ ನಡೆಯುತ್ತಿದೆ. ಇದರಲ್ಲಿ ಸ್ಥಳೀಯ ಆಡಳಿತ ಗ್ರಾಮ ಪಂಚಾಯತ್ ಸೇರಿದಂತೆ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಹೀಗೆ ಎಲ್ಲರೂ ಭಾಗಿಯಾಗಿದ್ದಾರೆ. ಜನರ ಮನೆಬಾಗಿಲಿಗೆ ಹೋಗಿ ಜನರನ್ನು ಲಸಿಕಾಕೇಂದ್ರದತ್ತ ಕರೆ ತರುವ ಮಹತ್ವದ ಕಾರ್ಯ ನಡೆದಿರುವುದು ಸಂತಸ ತಂದಿದೆ. ಇದೊಂದು ದೇಶ ಸೇವೆ ಕಾರ್ಯ ಎಂದು ನಾವು ಭಾವಿಸಿದ್ದೇವೆ. ಈ ಮೂಲಕ ಬೀದರ್ ಜಿಲ್ಲೆಯ ಎಲ್ಲಾ ಜನರಿಗೆ ಕೋರೊನಾ ದಿಂದ ವಿಮೋಚನೆ ಕೋಡಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ ಎಂದರು.
ನಾವು ಉತ್ತಮ ಕಾರ್ಯ ಮಾಡಿದರೆ ನಮಗೆ ಜನರು ಗೌರವಿಸುತ್ತಾರೆ ಅಷ್ಟೇ ಅಲ್ಲ ನಮ್ಮನ್ನು ದೇಶ ಸೇವೆಯಲ್ಲಿರುವವರು ಎಂದು ಹೋರಾಟಗಾರರಂತೆ ಕಾಣುತ್ತಾರೆ. ಇದನ್ನರಿತು ನಾವು ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗೋಣ ಎಂದರು.
ಹಗಲು ರಾತ್ರಿ ಪ್ರಯತ್ನ: ಕರೋನಾ ಮಹಾಮಾರಿ ತಡೆ ಕಾರ್ಯಾಚರಣೆ ನಿರಂತರ ನಡೆದಿದೆ. ವೈದ್ಯರು, ಪೊಲೀಸರು ಗಡಿಯಲ್ಲಿ, ಆಸ್ಪತ್ರೆಗಳಲ್ಲಿ ಪಾಳಿಯ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಶ್ರಮಿಸುತ್ತ ಕೋವಿಡ್ ವೈರಾಣು ನಮ್ಮ ಜಿಲ್ಲೆಗೆ ಮತ್ತೊಮ್ಮೆ 3ನೇ ಅಲೆಯಾಗಿ ಬಾರದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಿರಂತರ ಪ್ರಯತ್ನ: ಬೀದರ ಜಿಲ್ಲೆಯಲ್ಲಿ ಕೊನೆಯ ವ್ಯಕ್ತಿಗೂ ಲಸಿಕಾಕರಣ ಆಗುವವರೆಗೆ ನಮ್ಮ ಈ ಪ್ರಯತ್ನ ನಿರಂತರ ಜಾರಿ ಇರುತ್ತದೆ. 2ನೇ ಅಲೆಯ ಸಂದರ್ಭದಲ್ಲಿ ನಾವು ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇನ್ಮುಂದೆ ಕೋವಿಡ್ನಿಂದ ಯಾರು ಕೂಡ ಸಾಯದಂತೆ ನೋಡಿಕೊಳ್ಳಲು ಲಸೀಕಾರಣ ಕಾರ್ಯಕ್ಕೆ ಮೊದಲಾದ್ಯತೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ತಹಸೀಲ್ದಾರ ಶಕೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಹಾಗೂ ಇನ್ನೀತರರು ಇದ್ದರು.