ಮೈಸೂರು: ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಜನರು ಕೊರೋನ ಸೋಂಕಿಗೆ ಹೆದರುತ್ತಿದ್ದಾರೆ. ಕೊರೋನ ಸೋಂಕಿತ ಜನರಿಗೆ ಧೈರ್ಯ ತುಂಬಿಸುವಂತಹ ಕೆಲಸ ಕೂಡಾ ಸಾಕಷ್ಟು ಜನ ಮಾಡುತ್ತಿದ್ದಾರೆ. ಈ ಬಗ್ಗೆ ಆನ್ಲೈನ್ ಕಾರ್ಯಕ್ರಮಗಳು ಕೂಡಾ ನಡೆಯುತ್ತಿದೆ.
ಹೀಗಿರುವಾಗ ಮೈಸೂರು ಜಿಲ್ಲೆಯ ಒಂದೇ ಕುಟುಂಬದ 17 ಜನರು ಕೊರೋನದಿಂದ ಗೆದ್ದು ಬಂದು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿಗೆ ಹೆದರಬೇಡಿ, ಚಿಕಿತ್ಸೆ ಪಡೆದುಕೊಳ್ಳಿ ಎಂದು ಧೈರ್ಯ ಹೇಳುತ್ತಿದ್ದಾರೆ.
ಏಪ್ರಿಲ್ 24 ರಂದು ಮೈಸೂರು ಜಿಲ್ಲೆಯ ಬಡಗಲಪುರ ಗ್ರಾಮದ ರೈತ ಸಂಘದ ಮುಖಂಡ ನಾಗೇಂದ್ರ ಅವರ ಸಹೋದರ ಲಿಂಗರಾಜೇಗೌಡ ಎಂಬುವರಿಗೆ ಕೊರೋನ ಪಾಸಿಟಿವ್ ಆಗಿತ್ತು. ನಂತರ ಕುಟುಂಬದ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಿದಾಗ 17 ಮಂದಿಗೆ ಪಾಸಿಟಿವ್ ವರದಿ ದಾಖಲಾಗಿತ್ತು. ಆ ನಂತರ ದಿನನಿತ್ಯ ವೈದ್ಯರು ಮನೆಗೆ ಬಂದು ಆರೋಗ್ಯ ವಿಚಾರಿಸಿ, ಧೈರ್ಯ ತುಂಬುತ್ತಿದ್ದರು.
ಮನೆಯಲ್ಲೇ ಇದ್ದು ಔಷಧಿ ಉಪಚಾರವನ್ನು ಪಡೆದ ಕುಟುಂಬದ 17 ಜನರೂ ಈಗ ಕೊರೋನ ನೆಗೆಟಿವ್ ಆಗಿದ್ದಾರೆ. ಈಗ ಈ ಕುಟುಂಬ ಕೊರೋನ ಜಾಗೃತಿ ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.