ಹಾಸನ (ಏ.21): ಜೇಬು ಮುಟ್ಟದೇ ಕಿಸೆ ಕಳ್ಳತನ ಮಾಡುವ ಕಲೆ ಏನಾದರೂ ಗೊತ್ತಿದ್ದರೆ ಅದು ಕಾಂಗ್ರೆಸ್ ಹತ್ತಿರ ಕಲಿಯಬೇಕು ಎಂದು ಹಾಸನ ನಗರದಲ್ಲಿ ನಡೆದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದ ರಿಂಗ್ ರಸ್ತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಆವಣರದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ದೇಶದ ಹಿತ ನಮ್ಮ ಕೈಲಿ ಇದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಘಟನೆ ಬಗ್ಗೆ ಕೇಳಿದರೆ ಇದನ್ನು ವೈಯಕ್ತಿಕ ಘಟನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದು ಜಾತಿ ಉಳಿಸುವ ಚುನಾವಣೆ ಅಲ್ಲ. ದೇಶ ಉಳಿಸುವ ಚುನಾವಣೆ. ದೇಶದ ಹಿತಕ್ಕಾಗಿ ಬಿಜೆಪಿ ಬೆಂಬಲಿತ ಪ್ರಜ್ವಲ್ ಗೆಲ್ಲಿಸಬೇಕು. ಒಂದು ಕಡೆ ಗ್ಯಾರಂಟಿ ನೀಡಿ ಇನ್ನೊಂದು ಕಡೆ ಎಣ್ಣೆ ಬಾಟಲಿಯ ಬೆಲೆ ದುಪ್ಪಟ್ಟು ಹಣ ಮಾಡಲಾಗುತ್ತಿದೆ. ಇದೊಂದು ಜೇಬು ಮುಟ್ಟದೇ ಕಿಸೆ ಕಳ್ಳತನ ಮಾಡುವ ಕಲೆ. ಇದನ್ನು ಕಾಂಗ್ರೆಸ್ ಬಳಿ ಕಲಿಯಬೇಕು’ ಎಂದು ಮೂದಲಿಸಿದರು.

ಒಂದು ಕಡೆ ಫ್ರೀ, ಇನ್ನೊಂದು ಕಡೆ ವಿದ್ಯುತ್ ಬಿಲ್ ಹೆಚ್ಚಿಗೆ. ಇದೆಲ್ಲಾ ಸಿದ್ದರಾಮಯ್ಯ ಅವರ ವಂಚನೆಯ ತಂತ್ರ. ಎಸ್‌ಸಿ, ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಂಬೇಡ್ಕರ್ ಆ ಕಾಲದಲ್ಲೆ ಹೇಳಿದ್ದಾರೆ. ಇದು ದೇಶ ಉಳಿಸುವ ಚುನಾವಣೆಯೇ ಹೊರತು ಜಾತಿ ಉಳಿಸುವ ಚುನಾವಣೆಯಲ್ಲ. ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರಿಗೆ ಲೂಸ್ ಮೋಷನ್ ಪ್ರಾರಂಭವಾಗಿದೆ. ಈಗ ದೇಶ ಉಳಿಸುವುದಕ್ಕೆ ಓಟ್ ಹಾಕಬೇಕಾಗಿದೆ. ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ನಾವು ಶ್ರೀರಾಮ ಜಪ ಮಾಡುವವರು’ ಎಂದು ಹೇಳಿದರು.

Latest Indian news

Popular Stories