ಪೊಲೀಸರ ಸಮ್ಮುಖದಲ್ಲಿಯೇ ಸೈನಡ್ ಸೇವಿಸಿ ಆತ್ಮಹತ್ಯೆ

ಬೆಂಗಳೂರು: ಸೈನೈಡ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿನಿಮಾದಲ್ಲಿ ಅನೇಕರು ನೋಡಿದ್ದಾರೆ. ಪೊಲೀಸರು ಬೆನ್ನಟ್ಟಿ ಬಂದಿದ್ದನ್ನು ನೋಡಿ ಶಂಕಿತ ಸರಗಳ್ಳ ಸೈನೈಡ್ ಸೇವಿಸಿ ಸಾವನ್ನಪ್ಪಿದ್ದಾನೆ. ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಇದೀಗ ಸೈನೈಡ್ ಕಂಟಕ ಎದುರಾಗಿದೆ.
ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪ ಪಿಳ್ಳಂಗುಪ್ಪೆ ಕೈಗಾರಿಕಾ ಪ್ರದೇಶವಿದೆ. ಸರಗಳ್ಳತನ ಪ್ರಕರಣದ ಶಂಕಿತ ಅರೋಪಿ ಶಂಕರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೆ.ಆರ್. ಪುರ ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ಕೂಡಲೇ ಶಂಕರ್ ಸೈನೈಡ್ ಬಾಯಿಗೆ ಹಾಕಿಕೊಂಡಿದ್ದಾನೆ. ಕುಸಿದು ಬಿದ್ದ ಮದನಪಲ್ಲಿ ಮೂಲದ ಶಂಕರನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿದಿಲ್ಲ. ಇದೀಗ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಶಂಕಿತ ಆರೋಪಿ ಸಂಬAಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈನೈಡ್ ವಿಷ ಆರೋಪಿಗೆ ಸಿಕ್ಕಿರುವ ಬಗ್ಗೆ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ.
ಇದಕ್ಕೂ ಮುನ್ನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಪೊಲೀಸರಿಂದ ಶಂಕಿತ ಆರೋಪಿ ಶಂಕರ್ ಬಂಧನಕ್ಕೆ ಒಳಗಾಗಿದ್ದ. ಜೈಲು ಸೇರಿದ್ದ ಬಳಿಕ ಬಿಡುಗಡೆಯಾಗಿದ್ದ. ಕಳೆದ ಎರಡು ತಿಂಗಳ ಹಿಂದೆ ವೈಟ್‌ಫೀಲ್ಡ್ ವಿಭಾಗದಲ್ಲಿ ಸರಣಿ ಸರಗಳ್ಳತನ ಪ್ರಕರಣ ವರದಿಯಾಗಿತ್ತು. ಈ ಪ್ರಕರಣಗಳ ವಿಚಾರಣೆ ಸಂಬAಧ ಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೆ.ಆರ್. ಪುರಂ ಪೊಲೀಸರು ಶಂಕರ್ ಬೆನ್ನು ಬಿದ್ದಿದ್ದರು. ಶಂಕಿತನ ಬಂಧನ ವೇಳೆ ಈ ದುರ್ಘಟನೆ ನಡೆದಿದ್ದು, ಇದೀಗ ಆರೋಪಿ ಯಾವುದೇ ಅಪರಾಧ ಪ್ರಕರಣದ ಹಿನ್ನೆಲೆ ಹೊಂದಿಲ್ಲದಿದ್ದರೆ ಬಂಧನಕ್ಕೆ ತೆರಳಿದ್ದ ಕೆ.ಆರ್. ಪುರಂ ಪೊಲೀಸರಿಗೆ ಸಂಕಷ್ಟ ಎದುರಾಗಲಿದೆ.

Latest Indian news

Popular Stories