ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆ

ಬೆಂಗಳೂರು: ಕೊರೊನಾ ಅಬ್ಬರ ಇಳಿಕೆ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಹಾಗೂ ಸಮಾಜ ಪರೀಕ್ಷೆ ನಡೆಯಲಿದ್ದು, 22ರಂದು ಭಾಷಾ ವಿಷಯಗಳಾದ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಪರೀಕ್ಷೆ ನಡೆಯಲಿದೆ.
ಬೆಳಗ್ಗೆ 10.30ರಿಂದ 1.30 ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು ಮೂರು ವಿಷಯಗಳಿಗೆ 120 ಅಂಕಗಳಿಗಾಗಿ ಆಬ್ಜೆಕ್ಟಿವ್ ಮಾದರಿಯಲ್ಲಿ, ಒಎಂಆರ್ ಶೀಟ್ ನಲ್ಲಿ ಪರೀಕ್ಷೆ ನಡೆಯಲಿದೆ.
ಪ್ರತಿ ವಿಷಯಕ್ಕೆ ಒಎಂಆರ್ ಶೀಟ್ ನಲ್ಲಿ ಪರೀಕ್ಷೆ ಬರೆಯಬೇಕಿದೆ. ಪ್ರತಿ ವಿಷಯಕ್ಕೆ ಪ್ರಶ್ನೆ ಪತ್ರಿಕೆಯ ಬಣ ಬದಲಾಗಿದ್ದು, ಗಣಿತಕ್ಕೆ ಪಿಂಕ್ ಕಲರ್, ವಿಜ್ಞಾನಕ್ಕೆ ಆರೆಂಜ್ ಕಲರ್, ಸಮಾಜ ವಿಜ್ಞಾನ ಗ್ರೀನ್ ಕಲರ್ ನೀಡಲಾಗಿದೆ.
ವಿದ್ಯಾರ್ಥಿಗಳು ಸರಳವಾಗಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಈ ವಿಧಾನ ಅನುಸರಿಸಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿಗೆ ಅವಕಾಶ ನೀಡಲಾಗಿದ್ದು. ಕೆಮ್ಮು, ನೆಗಡಿ, ಜ್ವರ ಇರುವವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆ ಬರೆಯಲು 8,76,581 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, 4,72,643 ಬಾಲಕರು ಮತ್ತು 4,03,938 ಬಾಲಕಿಯರು ಸೇರಿದ್ದಾರೆ. 14,927 ಶಾಲೆಗಳು ಇದ್ದು, 4884 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ರಾಜ್ಯಾದ್ಯಂತ 73,066 ಪರೀಕ್ಷಾ ಕೊಠಡಿಗಳಿದ್ದು, 4884 ಮುಖ್ಯ ಅಧೀಕ್ಷಕರು, 4884 ಪ್ರಶ್ನೆಪತ್ರಿಕೆ ಅಭಿರಕ್ಷಕರು, 80,389 ಕೊಠಡಿ ಮೇಲ್ವಿಚಾರಕರು, 4884 ಸ್ಥಾನಿಕ ಜಾಗೃತ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಪ್ರತಿದಿನವೂ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಸ್ಯಾನಿಟೈಸೆಷನ್ ಆಗಲಿದ್ದು, ಎಲ್ಲಾ ಜಿಲ್ಲೆಗೆ ಒಂದೊAದು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಪರೀಕ್ಷಾ ಕೇಂದ್ರದ 200 ಮೀ. ಸುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಬಟ್ಟೆ ಮಾಸ್ಕ್ ಅಥವಾ ಸರ್ಜಿಕಲ್ ಮಾಸ್ಕ್ ವಿತರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲೆ ಆರೋಗ್ಯ ಕೌಂಟರ್ ತೆರೆಯಲಾಗಿದ್ದು, ಪರೀಕ್ಷಾ ಸಿಬ್ಬಂದಿ, ಮಾಸ್ಕ್, ಫೇಸ್ ಶೀಲ್ಡ್ ಧರಿಸಿರಬೇಕು ಎಂದು ಸೂಚಿಸಲಾಗಿದೆ.

Latest Indian news

Popular Stories