ಮಡಿಕೇರಿ ಏ.೨೬ : ಕೋವಿಡ್ ಎರಡನೇ ಅಲೆಯ ತೀವ್ರತೆಯ ನಡುವೆ ಮಡಿಕೇರಿ ನಗರಸಭೆ ಚುನಾವಣೆ ಏ.೨೭ ರಂದು ನಡೆಯಲಿದ್ದು, ನಗರದ ಎಲ್ಲಾ ಮತದಾರರು ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಂಡು ನಿರ್ಭೀತಿಯಿಂದ ಮತ ಚಲಾಯಿಸಲು ಶಾಂತಿನಿಕೇತನ ಯುವಕ ಸಂಘ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಪ್ರಮುಖ ಹೆಚ್.ಎಸ್.ಚೇತನ್ ಅವರು ಮತದಾನ ನಮ್ಮ ಹಕ್ಕು, ಮಡಿಕೇರಿ ನಗರದ ಸರ್ವತೋಮುಖ ಅಭಿವೃದ್ಧಿಗೆ ನಗರಸಭೆ ಬಲಿಷ್ಠ ಹಾಗೂ ಅಭಿವೃದ್ಧಿ ಪೂರಕ ಸದಸ್ಯರನ್ನು ಹೊಂದಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಶೇಕಡಾವಾರು ಮತದಾನದಿಂದ ಮಾತ್ರ ಸೂಕ್ತ ಅಭ್ಯರ್ಥಿಯ ಆಯ್ಕೆ ಸಾಧ್ಯ, ಯಾರೂ ಆತಂಕಪಡುವ ಅಗತ್ಯವಿಲ್ಲ. ಪ್ರತೀ ಮತಗಟ್ಟೆಯನ್ನು ಮತ್ತು ಪರಿಸರವನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ಮಂಗಳವಾರ ಕೂಡ ಸ್ಯಾನಿಟೈಸ್ ಮಾಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದ್ದರಿಂದ ನಗರದ ಎಲ್ಲಾ ಜನತೆ ತಪ್ಪದೇ ಮತದಾನ ಮಾಡುವ ಮೂಲಕ ಸುಂದರ ಮಡಿಕೇರಿಯ ಪರಿಕಲ್ಪನೆಯ ಸಾಕಾರನಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಚೇತನ್ ಮನವಿ ಮಾಡಿದ್ದಾರೆ.