ಕಾಂಗ್ರೆಸಿಗರು ನಿರುದ್ಯೋಗಿಗಳಾಗಿದ್ದಾಗ ಪಾದಯಾತ್ರೆ ಮಾಡುತ್ತಾರೆ – ಗೋವಿಂದ ಕಾರಜೋಳ

ಬಾಗಲಕೋಟೆ:ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದುಕೊಂಡು ಮನೆಯಲ್ಲಿ ನಿರುದ್ಯೋಗಿಗಳಾಗಿರ್ತಾರೆ ಆಗ ಪಾದಯಾತ್ರೆ ಮಾಡ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಲು ಮುಂದಾಗಿರುವ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ನಿರುದ್ಯೋಗಿಗಳು ಆದಾಗೊಮ್ಮೆ ಪಾದಯಾತ್ರೆ ಮಾಡುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ 2012-13ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊಸಪೇಟೆಯಿಂದ ಕೂಡಲಸಂಗಮವರೆಗೆ ಪಾದಯಾತ್ರೆ ಮಾಡಿದರು. ಐದು ವರ್ಷಗಳಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ. ಐದು ವರ್ಷಗಳಲ್ಲಿ 50 ಸಾವಿರ ಕೋಟಿ ನೀಡಿ ಯೋಜನೆ ಪೂರ್ಣ ಮಾಡ್ತೀವಿ ಅಂದಿದ್ರು. ಏನ್ ಮಾಡಿದ್ರು? ಎಂದು ಪ್ರಶ್ನಿಸಿದರು.

ಯುಕೆಪಿ ಮೂರನೆ ಹಂತದ ಯೋಜನೆಗೆ 6336 ಕೋಟಿ ರೂಪಾಯಿಗಿಂತ ಹೆಚ್ಚು ಕೊಟ್ಟಿಲ್ಲ. ಅವರು ಕೃಷ್ಣೆಗೆ ಖರ್ಚು ಮಾಡಿದ್ದೇ 7728 ಕೋಟಿ ರೂ. ಏನು ಸಾಧನೆ ಮಾಡಿದ್ರು, ಏನು ಮಾಡಲಿಲ್ಲ. ನಾವು ಆರ್ ಆ್ಯಂಡ್ ಆರ್ (ಪುನರ್ ವಸತಿ ಮತ್ತು ಪುನರ್ ನಿರ್ಮಾಣ)ಮಾಡಬೇಕು ಅಂತೇಳಿ. 2012-12ರಲ್ಲಿ ನಮ್ಮದೇ ಸರ್ಕಾರ ಇದ್ದಾಗ 17207 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ಕೊಟ್ಟಿದ್ದೇವೆ. ಅದನ್ನು ಮುಂದುವರೆಸಿದ್ರೆ ಇವತ್ತು 60 ಸಾವಿರ ಕೋಟಿ ರೂಪಾಯಿಗೆ ಹೋಗುತ್ತಿರಲಿಲ್ಲ.ಮಾಡದೇ ಇರೋರು ಜವಾಬ್ದಾರಿ ಹೊರಬೇಕಾಗುತ್ತದೆ ಎಂದರು.

ಕಾಂಗ್ರೆಸ್‌ಗೆ ಪಾದಯಾತ್ರೆ ಮಾಡುವ ಯಾವುದೇ ನೈತಿಕತೆ ಇಲ್ಲ. ಮೇಕೆದಾಟು ಕೂಡಾ ನಮ್ಮದೇ, ನಮ್ಮ ಪಾಲಿನ ನೀರನ್ನು ಉಪಯೋಗ ಮಾಡಿಕೊಳ್ಳೋಕೆ ಖಂಡಿತ ನಾವೂ ಕೆಲಸ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಮುಂದೆ ಕೇಸ್ ಇರೋದ್ರಿಂದ ಕೇಸ್ ಮುಗಿಯೋವರೆಗೂ ನಾವು ಕಾಯಬೇಕಾಗುತ್ತದೆ ಎಂದು ಹೇಳಿದರು.

Latest Indian news

Popular Stories