ಬೆಂಗಳೂರು ಗ್ರಾಮಂತರ: ಮುಂಬರುವ ಎಲ್ಲಾ ಚುನಾವಣೆಗಳನ್ನು ಎದರಿಸಲು ಆ.28ರಿಂದ ರಾಜ್ಯಾದ್ಯಂತ ಪಾದಯಾತ್ರೆ ಆರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜಿಲ್ಲೆ ದೇವನಹಳ್ಳಿ ಬಳಿಯ ಕ್ಲಾರ್ಕ್ ಏಕ್ಸೋಟಿಕ್ ರೆಸಾರ್ಟ್ನಲ್ಲಿ ನಡೆಯುತ್ತಿರುವ ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಗೆ ಸಿದ್ಧವಾಗಬೇಕು. ಪ್ರತಿ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡುವಂತೆ ಎಐಸಿಸಿ (AICC) ಹೇಳಿದೆ.
ಆಗಸ್ಟ್ 8ರಿಂದ 15ರವರೆಗೆ ರಾಜ್ಯದಲ್ಲಿ ಪಾದಯಾತ್ರೆ ಮಾಡುತ್ತೇವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನ ಕಡ್ಡಾಯವಾಗಿ ಮಾಡಬೇಕು. ವಿದ್ಯಾರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಕಾರ್ಯಕ್ರಮ ನಡೆಸಲಾಗುತ್ತದೆ. ತ್ರಿವರ್ಣಧ್ವಜ ಹಾರಿಸುವ ಮೂಲಕ ಪಾದಯಾತ್ರೆ ಮಾಡಲಾಗುತ್ತದೆ ಎಂದರು.
ನಾವು ಬಿಜೆಪಿಯವರ ಬಗ್ಗೆ ಮಾತನಾಡಿ ಕಾಲಹರಣ ಮಾಡುವುದು ಬೇಡ. ಮಾಧ್ಯಮದವರಿಗೆ ಯಾವುದೇ ವಿವರಣೆಯನ್ನ ಕೊಡಬಾರದು. ಈ ಬಗ್ಗೆ ಎಐಸಿಸಿಯಿಂದ ಕಟ್ಟುನಿಟ್ಟಾಗಿ ತಿಳಿಸಿದೆ. ಭಾರತ ಸತ್ತಾಗ ಕಾಂಗ್ರೆಸ್ ಸತ್ತು ಹೋಗುತ್ತದೆ. ಅಲ್ಲಿಯವರೆಗೂ ಕಾಂಗ್ರೆಸ್ ಜೀವಂತವಾಗಿರುತ್ತದೆ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ನಮಗೆ ಶಕ್ತಿ ಕೊಡಬೇಕು. ರಾಜ್ಯದ ಜನರ ಸೇವೆ ಮಾಡಲು ನಿಮ್ಮ ಜೊತೆ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದನಿದ್ದೇನೆ ಮತ್ತು ನಾನು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದರು.
ಆಗಸ್ಟ್ 2ರಂದು ಕೆಪಿಸಿಸಿ ಅಧ್ಯಕ್ಷನಾಗಿ ಜವಬ್ದಾರಿ ವಹಿಸಿಕೊಂಡಿದ್ದೆ. 7-8 ತಿಂಗಳಿಂದ ಈ ಕಾರ್ಯಕ್ರಮಕ್ಕಾಗಿ ಯೋಜನೆ ರೂಪಿಸಿದ್ದೆವು. ಹಲವು ಕಾರ್ಯಕ್ರಮಗಳಿಂದ 4 ಬಾರಿ ಮುಂದೂಡಿಕೆ ಮಾಡಿದ್ದೆವು. ಕೊನೆಗೆ ಇಲ್ಲಿ ಶಿಬಿರ ಅಯೋಜಿಸಿದ್ದೇವೆ. ಎಐಸಿಸಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಲ್ಲಿ ಚರ್ಚಿಸಲು ಸೇರಿರುವ ನಾಯಕರಿಗಿಂತ ಹೆಚ್ವು ಅರ್ಹತೆಯುಳ್ಳ ನಾಯಕರು ಇದ್ದರು. ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಆ ನಿಟ್ಟಿನಲ್ಲಿ ಸಲಹೆ ಕೊಡಬೇಕು. 6 ಸಮಿತಿಗಳ ಸದಸ್ಯರು ತಮ್ಮ ವಿಚಾರಗಳನ್ನ ಮಂಡಿಸಲಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಲಹೆ ನೀಡಬೇಕು ಎಂದರು.
ಆಫ್ ದಿ ರೆಕಾರ್ಡ್, ಆನ್ ದಿ ರೆಕಾರ್ಡ್ ಹೇಳುವಂತಿಲ್ಲ
ಸಮಿತಿ ಸಭೆಗಳಲ್ಲಿ ನಡೆಯುವ ಹಾಗೂ ಆಗುವ ತೀರ್ಮಾನಗಳನ್ನು ಮಾಧ್ಯಮದವರಿಗೆ ಹೇಳುವಂತಿಲ್ಲ. ಯಾರು ಕೂಡ ರೆಕಾರ್ಡ್ ಮಾಡುವಂತಿಲ್ಲ. ಆಫ್ ದಿ ರೆಕಾರ್ಡ್, ಆನ್ ದಿ ರೆಕಾರ್ಡ್ ಅಂತ ಏನು ಸಹ ಹೇಳುವಂತಿಲ್ಲ. ಒಂದು ವೇಳೆ ಹೇಳಿದ್ದು ಗೊತ್ತಾದಾರೆ ಯಾವ ಕಣ್ಣಿನಲ್ಲಿ ನೋಡಬೇಕೋ ಆ ಕಣ್ಣಿನಲ್ಲಿ ನೋಡುತ್ತೇವೆ. ಎಲ್ಲರಿಗೂ ಸಮಸ್ಯೆ ಇದೆ. ಆದರೆ ಇದು ಸಮಸ್ಯೆ ಚರ್ಚೆ ಮಾಡುವ ಸಭೆ ಅಲ್ಲ. ರಾಜ್ಯ ಮತ್ತು ರಾಷ್ಟ್ರದ ಬಗ್ಗೆ ಚರ್ಚೆ ಮಾಡುವ ಸಭೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ವಿಪಕ್ಷ ನಾಯಕರು ಮತ್ತು ಸುರ್ಜೇವಾಲಾ ಅವರ ಗಮನಕ್ಕೆ ತನ್ನಿ ಎಂದು ಸೂಚಿಸಿದರು.
ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಆಗ ಮಾತ್ರ ಎಲ್ಲ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸಲು ಅನೇಕ ಕ್ರಮ ಎಐಸಿಸಿ ತೆಗೆದುಕೊಳ್ಳುತ್ತಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ‘ಸುಪ್ರೀಂ’ ಆದೇಶಿಸಿದೆ. ಈ ಚುನಾವಣೆಗಳಲ್ಲಿ ಗೆಲ್ಲುವುದು ಕಾಂಗ್ರೆಸ್ಗೆ ಬಹಳ ಮುಖ್ಯ. ಹಿಂದುಳಿದ ವರ್ಗದ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಮೀಸಲಾತಿ ಬಗ್ಗೆ ತೀರ್ಪು ನೀಡಿದೆ ಎಂದರು