ತೆಲಂಗಾಣದಲ್ಲಿ ಟಿಆರ್ ಎಸ್ ಶಾಸಕರ ಖರೀದಿ ಯತ್ನ ವಿಫಲ: ನೋಟುಗಳ ಕಂತೆ ಸಮೇತ ನಾಲ್ವರ ಬಂಧನ!

ಹೈದರಾಬಾದ್: ತೆಲಂಗಾಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಟಿಆರ್ ಎಸ್ ಶಾಸಕರ ಖರೀದಿ ಯತ್ನ ಪೊಲೀಸ್ ಕಾರ್ಯಾಚರಣೆಯ ಮೂಲಕ ಬಯಲಿಗೆ ಬಂದಿದೆ.

ಟಿಆರ್ ಎಸ್ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕಾಗಿ ದೆಹಲಿಯ ಒಂದಷ್ಟು ಮಂದಿ ಹಲವು ಆಮಿಷಗಳನ್ನೊಡ್ಡಿದ್ದರು. ಇದರ ಯತ್ನದ ಭಾಗವಾಗಿ ಹೈದರಾಬಾದ್ ನ ಹೊರವಲಯದ ಫಾರ್ಮ್ ಹೌಸ್ ನಲ್ಲಿ ನೋಟುಗಳ ಕಂತೆಗಳ ಸಮೇತ ಪೊಲೀಸರು ನಾಲ್ವರನ್ನು  ಬಂಧಿಸಿದ್ದಾರೆ. 

ಬಂಧಿತರನ್ನು ದೆಹಲಿ, ತಿರುಪತಿ ಮತ್ತು ಹೈದರಾಬಾದ್  ಮೂಲದ ಏಜೆಂಟ್ ಗಳೆಂದು ಗುರುತಿಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳ ಕಂತೆಗಳೊಂದಿಗೆ ವಶಕ್ಕೆ ಪಡೆಯಲಾಗಿದೆ.

ಟಿಆರ್​ಎಸ್​ನ ನಾಲ್ವರು ಶಾಸಕರ ಖರೀದಿ ಯತ್ನ: ಫಾರ್ಮ್‌ಹೌಸ್‌ನಲ್ಲಿ ನೋಟುಗಳ ಬಂಡಲ್ ಸಮೇತ ನಾಲ್ವರ ಸೆರೆ

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್​ ನೇತೃತ್ವದ ಟಿಆರ್​ಎಸ್​ ಪಕ್ಷದ ಶಾಸಕರ ಕುದುರೆ ವ್ಯಾಪಾರದ ಯತ್ನದ ಸಂಬಂಧ ಹೈದರಾಬಾದ್​ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

ಸೈಬರಾಬಾದ್ ಪೊಲೀಸರು ರಂಗಾ ರೆಡ್ಡಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ವ್ಯಕ್ತಿಗಳು ಹಣ, ಗುತ್ತಿಗೆ ಹಾಗೂ ಪದವಿಯನ್ನು ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಟಿಆರ್ ಎಸ್ ಶಾಸಕರಿಂದ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದಲ್ಲಿ ನಾವು ಫಾರ್ಮ್ ಹೌಸ್ ಮೇಲೆ ದಾಳಿನಡೆಸಿದಾಗ ಅಲ್ಲಿ ಮೂವರು ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ಹೇಳಿದ್ದಾರೆ. 

ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತಾ ರಾವ್ ಹಾಗೂ ರೋಹಿತ್ ರೆಡ್ಡಿ ಎಂಬ ಶಾಸಕರಿಗೆ ಪಕ್ಷಾಂತರ ಮಾಡುವುದಕ್ಕೆ ಆಮಿಷವೊಡ್ಡಲಾಗಿತ್ತು. ಯಾವ ಪಕ್ಷಕ್ಕೆ ಶಾಸಕರನ್ನು ಪಕ್ಷಾಂತರ ಮಾಡಲು ಆಮಿಷವೊಡ್ಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಸ್ಪಷ್ಟವಾಗಿದೆ. 

ಈ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸರ್ಕಾರದ ವಿಪ್ ಬಲ್ಕಾ ಸುಮನ್, ಟಿಆರ್ ಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Latest Indian news

Popular Stories