ಬಂಟ್ವಾಳ, ಆ.8: ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಂಜದಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾನು ಆಡುತ್ತಿದ್ದ ಉಯ್ಯಾಲೆಗೆ ಆಸರೆಯಾಗಿದ್ದ ಸೀರೆಯು ಆಕಸ್ಮಿಕವಾಗಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತ ಬಾಲಕಿ ಬಂಟ್ರಂಜ ನಿವಾಸಿ ಶೇಖರ್ ಎಂಬವರ ಪುತ್ರಿ ಲಿಕಿತಾ.
ಬಾಬನಕಟ್ಟೆ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಳು.
ಲಿಕಿತಾ ಮನೆಯಲ್ಲಿಯೇ ಇದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.. ಆಕೆಯ ತಂದೆ ಶೇಖರ್ ತನ್ನ ಪತ್ನಿ ಚಂದ್ರಾವತಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಅವಳು ಉಯ್ಯಾಲೆಯಲ್ಲಿ ಆಡುತ್ತಿದ್ದಳು.
ಚಂದ್ರಾವತಿ ಹಿಂತಿರುಗಿದಾಗ ಮಗಳು ಸೀರೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಜೋರಾಗಿ ಕಿರುಚಿದಳು. ಆಕೆಯ ಕೂಗಿನಿಂದ ಗಾಬರಿಗೊಂಡ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಗಂಟಿನಿಂದ ಬಿಡಿಸಿದ್ದಾರೆ. ಆದರೆ, ಲಿಕಿತಾ ಅದಾಗಲೇ ಮೃತಪಟ್ಟಿದ್ದಳು.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.