ಬೆಳ್ತಂಗಡಿ: ಕಾಡಿನಲ್ಲಿ ವಿಷ ಸೇವಿಸಿ ವೀಡಿಯೋ ರವಾನೆ; ತಕ್ಷಣ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಬೆಳ್ತಂಗಡಿ, ಸೆ.29: ಯುವಕನೊಬ್ಬ ಕಾಡಿನಲ್ಲಿ ವಿಷ ಸೇವಿಸುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ. ಯುವಕನ ಕುಟುಂಬಸ್ಥರಿಂದ ಸುದ್ದಿ ತಿಳಿಯುತ್ತಿದ್ದಂತೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಧಾವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ನಿವಾಸಿ ಸುನೀಲ್ (28) ಸೆ.28ರಂದು ಬುಧವಾರ ಧರ್ಮಸ್ಥಳಕ್ಕೆ ಬೈಕ್‌ನಲ್ಲಿ ಬಂದಿದ್ದರು. ಶ್ರೀಗಳ ದರ್ಶನ ಪಡೆದ ಬಳಿಕ ಮಹಾತ್ಮಗಾಂಧಿ ವೃತ್ತದ ಬಳಿಯ ಗುಡ್ಡಗಾಡು ಅರಣ್ಯಕ್ಕೆ ತೆರಳಿ ವಿಷ ಸೇವಿಸಿ, ಅದರ ವಿಡಿಯೋವನ್ನು ಕುಟುಂಬ ಸದಸ್ಯರಿಗೆ ರವಾನಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಧರ್ಮಸ್ಥಳ ಠಾಣೆಯ ಎಸ್‌ಐ ಅನಿಲ್‌ಕುಮಾರ್ ಮತ್ತು ಸಿಬ್ಬಂದಿ ಸುನೀಲ್‌ಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಸುನೀಲ್‌ನನ್ನು ಕಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುನಿಲ್ ಅವರು ತಮ್ಮ ತವರು ನಗರದಲ್ಲಿ ಪಾದರಕ್ಷೆಗಳ ಅಂಗಡಿಯನ್ನು ಹೊಂದಿದ್ದಾರೆ. ಮೂರು ತಿಂಗಳ ಮಗುವನ್ನು ಹೊಂದಿದ್ದಾರೆ. ಪತ್ನಿ ಜತೆಗಿನ ಭಿನ್ನಾಭಿಪ್ರಾಯದಿಂದ ಜೀವನ ಅಂತ್ಯಗೊಳಿಸಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

Latest Indian news

Popular Stories