ಲಕ್ನೋ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 350ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸ ಲಿದೆಯೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ನಡೆದ ಸಂದರ್ಶನದಲ್ಲಿ ಅವರು, ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಚುನಾವಣೆಗೆ ಮೊದಲೇ ಧ್ರುವೀಕರಣ ಕೆಲಸ ಆರಂಭಿಸಿದ್ದಾರೆ. ಅದು ಅವರಿಗೆ ಫಲ ನೀಡುವುದಿಲ್ಲ. ಇನ್ನು, ಪ್ರಿಯಾಂಕಾ ವಾದ್ರಾ ಅವರ ಚುನಾವಣ ಪ್ರವಾಸೋದ್ಯಮ ಇಲ್ಲಿನ ಕಾಂಗ್ರೆಸ್ಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಹಾಗಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ’ ಎಂದಿದ್ದಾರೆ.
ಹಿಂದಿನ ಸರಕಾರಗಳು ಹುಟ್ಟುಹಾಕಿದ್ದ ಮಾಫಿಯಾಗಳನ್ನು ನಮ್ಮ ಸರಕಾರ ನಿರ್ನಾಮ ಮಾಡಿದೆ. ನಾವು ಕ್ರಿಮಿನಲ್ಗಳು, ಭ್ರಷ್ಟಾಚಾರಿಗಳು ಮತ್ತು ಗ್ಯಾಂಗ್ಸ್ಟರ್ಗಳ ವಿರುದ್ಧ ಬುಲ್ಡೋಜರ್ಗಳನ್ನು ಬಳಸಿ ಧ್ವಂಸ ಮಾಡಿದ್ದೇವೆ. ಒಂದು ವೇಳೆ ಅಖಿಲೇಶ್ ಅವರಿಗೆ ಈ ರೀತಿಯ ಕ್ರಮಗಳಿಂದ ಕಷ್ಟವಾಗುತ್ತಿದ್ದರೆ, ಅದು ಅವರು ಕ್ರಿಮಿನಲ್ಗಳನ್ನು ಬೆಂಬಲಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ’ ಎಂದು ಯೋಗಿ ಟಾಂಗ್ ನೀಡಿದ್ದಾರೆ.