ಸಂಕೇಶ್ವರ : ಸಂಕೇಶ್ವರ ಪಟ್ಟಣದಿಂದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಬಸ್ ನ ಬ್ರೇಕ್ ಫೇಲ್ ಆಗಿ ಚಾಲಕನ ಸಮಯ ಪ್ರಜ್ಞೆ ಯಿಂದ 50 ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಂಗಳವಾರ ನಡೆದಿದೆ.
ಸಂಕೇಶ್ವರದ ಪ್ರತಿಷ್ಠಿತ ಹೈಸ್ಕೂಲಿನ ಸುಮಾರು 50 ಮಂದಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದ ಸಂಕೇಶ್ವರ ಘಟಕದ ಸಾರಿಗೆ ಸಂಸ್ಥೆಯ ಬಸ್ ಮೂಲಕ ನೆರೆಯ ಮಹಾರಾಷ್ಟ್ರದ ಪೂನಾ ಬಳಿ ಇರುವ ಮಹಾಬಲೇಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಆದರೆ ಮಹಾಬಲೇಶ್ವರ ಜಮ್ಮು ಕಾಶ್ಮೀರದ ರೀತಿ ಘಟ್ಟ ಪ್ರದೇಶವಾಗಿದ್ದು, ಈ ವೇಳೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಬ್ರೇಕ್ ಫೇಲ್ ಆಗಿದೆ.
ಕೂಡಲೇ ಸಮಯ ಪ್ರಜ್ಞೆ ಮೆರೆದ ಬಸ್ಸಿನ ಚಾಲಕ ತಗ್ಗು ಪ್ರದೇಶದತ್ತ ಬಸ್ಸನ್ನು ನಡೆಸದೆ ಗುಡ್ಡ (ದಿಬ್ಬ) ಕ್ಕೆ ಬಸ್ಸನ್ನು ಡಿಕ್ಕಿ ಹೊಡೆಸುವ ಮೂಲಕ ಬಸ್ಸು ಮುಂದೆ ಹೋಗದಂತೆ ನೋಡಿಕೊಂಡಿದ್ದಾನೆ. ಇದರಿಂದ 50 ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.