ಬೆಂಗಳೂರು: ಹಂಸಲೇಖರ ಹೇಳಿಕೆ ರಾಜ್ಯದಲ್ಲಿ ತಲ್ಲಣಗೊಳಿಸಿದ್ದು ಇದೀಗ ಇತಿಹಾಸ. ಇದೀಗ ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ಸುದ್ದಿಯಲ್ಲಿದ್ದಾರೆ.
ಫೆಸ್ಬುಕ್ ಪೋಸ್ಟ್’ನಲ್ಲಿ ದಿನೇಶ್ ಅಮೀನ್ ಮಟ್ಟು ಈ ರೀತಿಯಾಗಿ ಬರೆದುಕೊಂಡಿದ್ದಾರೆ.
“ಸುರೇಶ್ ಕುಮಾರ್ ಅವರೇ ಎಷ್ಟು ದಿನ ಮನಸ್ಸಲ್ಲಿ ಕಹಿ ಇಟ್ಟುಕೊಂಡು ಸಿಹಿ ಕಕ್ಕುತ್ತೀರಿ?
ಪೇಜಾವರರ ಹಿಪಾಕ್ರಸಿಯನ್ನು ಹಂಸಲೇಖ ಅವರು ಬಯಲು ಮಾಡಿದ್ದನ್ನು ಸಹಿಸದೆ ಒಂದೇ ಸಮನೆ ಸಹಿಷ್ಣುತೆ ಬಗ್ಗೆ ಪಾಠ ಮಾಡುತ್ತಿದ್ದೀರಲ್ಲಾ!
ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಖಾನ್ ಅವರ ಮನೆಗೆ ನಿಮ್ಮ ಪರಿವಾರದವರು ನುಗ್ಗಿ ಫ್ರಿಡ್ಜ್ ಒಳಗೆ ದನದ ಮಾಂಸ ಇದೆಯೆಂದು ಆರೋಪಿಸಿಆ ಬಡಪಾಯಿ ಮುಸ್ಲಿಮ್ ಮನುಷ್ಯನನ್ನು ಸುಟ್ಟು ಕೊಂದಾಗ ನಿಮ್ಮ ಆತ್ಮಸಾಕ್ಷಿಯನ್ನು ಎಲ್ಲಿ ಮಾರಾಟಕ್ಕಿಟ್ಟೀದೀರಿ?
ನಿಮ್ಮದೇ ಪಕ್ಷದ ಸಂಸದ ಮತ್ತು ನಿಮ್ಮದೇ ಜಾತಿಯ ಅನಂತಕುಮಾರ ಹೆಗಡೆ ದಲಿತರನ್ನು ನಾಯಿಗಳು ಎಂದು ಲೇವಡಿಮಾಡಿದಾಗ ನಿಮ್ಮ ಫೇಸ್ ಬುಕ್ ಖಾತೆ ಮುಚ್ಚಿ ತೀರ್ಥಯಾತ್ರೆಗೆ ಹೋಗಿದ್ದೀರಾ?
ನಿಮಗಿಂತ ಮನಸ್ಸಿನಲ್ಲಿರುವ ಕಹಿಯನ್ನೆಲ್ಲಾ ಬಸಬಸನೆ ಕಕ್ಕುತ್ತಿರುವ ನಳಿನ್ ಕಟೀಲ್, ಸಿಟಿ ರವಿ ಮೊದಲಾದವರು ವಾಸಿ. ಕನಿಷ್ಠ ಅವರು ಆತ್ಮವಂಚಕರಲ್ಲ.
ನಿಮ್ಮ ಹಾಗೆ ದ್ವೇಷ,ಅಸೂಯೆ,ಸೇಡುಗಳ ಕಹಿಯನ್ನು ಒಳಗೆ ಬಚ್ಚಿಟ್ಟು ಬಾಯಲ್ಲಿ ಸಿಹಿ ಉದುರಿಸುವುದಿಲ್ಲ.
‘ಯಾವುದೇ ರೀತಿಯ ಅಸಹಿಷ್ಣುತೆ ಆರೋಗ್ಯಕರ ಅಲ್ಲ’ ಎಂಬ ಬಿನ್ನಾಣದ ಮಾತುಗಳನ್ನು ಅವರು ಆಡುವುದಿಲ್ಲ.
ನಿಮ್ಮನ್ನು ಯಾಕೆ ದೂರಬೇಕು? ಈಗಲೂ ನಿಮ್ಮ ಹಿಪಾಕ್ರಸಿಯ ನಾತ ಸೂಸುವ ಪ್ರತಿ ಪೋಸ್ಟ್ಗೆ ಲೈಕ್ ಒತ್ತಿ ಗೋಣು ಆಡಿಸುವ (CITU, AITUC ನಾಯಕರೂ ಸೇರಿದಂತೆ) ತಥಾಕಥಿತ ಪ್ರಗತಿಪರರು ಇರುವ ವರೆಗೆ ನಿಮ್ಮ ಸಜ್ಜನಿಕೆಯ ನಾಟಕ ಇದೇ ರೀತಿ ಮುಂದುವರಿಯಲಿದೆ ಎನ್ನುವುದು ನಮಗೂ ಗೊತ್ತು” ಎಂದು ಪೋಸ್ಟ್ ಮಾಡಿದ್ದಾರೆ.