“ಮುಸ್ಲಿಮರು ದೇಶದ ಸ್ವಾತಂತ್ರ್ಯಕ್ಕಾಗಿ ಎದೆಯ ಮೇಲೆ ಗುಂಡೇಟು ತಿಂದಿದ್ದಾರೆ, ಈ ದೇಶ ನಮ್ಮದು” – ಅಬ್ಬರಿಸಿದ ಝಮೀರ್ ಅಹ್ಮದ್

ಬೆಳಗಾವಿ: ಗೋಕಾಕದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಪ್ರಚಾರ ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ರೋಷಾವೇಶದ ಭಾಷಣಕ್ಕೆ ಪೋಡಿಯಂ ಗಾಜು ಪುಡಿಪುಡಿಯಾಗಿದೆ.

ತಮ್ಮ ಪ್ರಚಾರ ಭಾಷಣದ ನಡುವೆ ಆವೇಶಕ್ಕೀಡಾದ ಜಮೀರ್ ಅಹಮ್ಮದ್, ಉರ್ದುವಿನಲ್ಲಿ “ಹಿಂದೀ ಹೈ ಹಮ್. ಹಿಂದೂಸ್ತಾನ್ ಹಮಾರಾ. ಮುಸಲ್ಮಾನರು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಎಷ್ಟೋ ಮುಸ್ಲಿಮರು ದೇಶದ ಸ್ವಾತಂತ್ರ್ಯಕ್ಕಾಗಿ ಗುಂಡೇಟು ತಿಂದಿದ್ದಾರೆ. ಈ ದೇಶ ನಮ್ಮದು,” ಎನ್ನುತ್ತಾ ಗಾಜಿನ ಪೋಡಿಯಂ ಅನ್ನು ಕೈಯಿಂದ ಬಲವಾಗಿ ಗುದ್ದಿದರು. ಆ ರಭಸಕ್ಕೆ ಪೋಡಿಯಂ ಗಾಜು ಪುಡಿಯಾಗಿದೆ.

ಅಲ್ಲದೆ, ವೇದಿಕೆಯಲ್ಲಿದ್ದವರಿಗೆ ತಮ್ಮ ಕೈ ತೋರಿಸಿದ ಜಮೀರ್ “ಯೇ ಪಠಾಣ್ ಕಾ ಹಾತ್ ಹೈ. ನನ್ನ ಕೈಗೆ ಏನೂ ಆಗಲ್ಲ”, ಎಂದರು. ಈ ವೇಳೆ ಜಮೀರ್ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ನಗರದ ಕೆಜಿಎನ್‌ ಸಭಾಂಗಣದಲ್ಲಿ ಮಾತನಾಡಿದ ವಕ್ಫ್ ಸಚಿವರೂ ಆದ ಜಮೀರ ಅಹಮ್ಮದ್‌ ಖಾನ್‌, “ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಪರವಾಗಿ ಹಲವಾರು ಜನಪರ ಯೋಜನೆಗಳನ್ನು ತಂದು, ಅವರ ಬೆನ್ನೆಲುಬಾಗಿ ನಿಂತಿದೆ” ಎಂದು ಹೇಳಿದರು.

”ಬಿಜೆಪಿಗೆ ಹಿಂದೂ, ಮುಸ್ಲಿಂ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳೂ ಇಲ್ಲ. ಪರಸ್ಪರ ದ್ವೇಷ ಬಿತ್ತುವುದನ್ನೇ ಅದು ಅಸ್ತ್ರ ಮಾಡಿಕೊಂಡಿದೆ”, ಎಂದು ವಾಗ್ದಾಳಿ ನಡೆಸಿದರು. ”ಕಾಂಗ್ರೆಸ್‌ ಪಕ್ಷ ತಾನು ನೀಡಿದ ಭರವಸೆಗಳನ್ನು ಈಡೇರಿಸಿದೆ. ಇಂಥ ಪಕ್ಷವನ್ನು ಈ ಬಾರಿ ಜನತೆ ಬೆಂಬಲಿಸಿ ದೇಶದ ಬಡವರ ಸೇವೆ ಮಾಡಲು ಅವಕಾಶ ನೀಡಬೇಕು”, ಎಂದು ಕೋರಿದರು.

“ಇಸ್ಲಾಂ ಧರ್ಮ ಜಾತೀಯತೆಯನ್ನು ಕಲಿಸುವುದಿಲ್ಲ. ಮುಸ್ಲಿಮರು ವೈಯಕ್ತಿಕ ಸಮಸ್ಯೆ, ಜಾತೀಯತೆ ಬದಿಗೊತ್ತಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

Latest Indian news

Popular Stories