ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಗಲಭೆ ಸಂಪೂರ್ಣವಾಗಿ ತಣ್ಣಗಾಗಿ ನಮ್ಮ ಹಿಡಿತಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ಯಾವುದೇ ಕೊತಕೊತ, ಧಗಧಗ ಇಲ್ಲ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಗಲಭೆ ಸಂಬಂಧ ಈವರೆಗೆ 60 ಮಂದಿಯನ್ನು ಬಂಧಿಸಲಾಗಿದ್ದು, 24 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಘಟನೆಯಲ್ಲಿ ಒಂದು ಕಾರು, ಆಟೋ, ಎರಡು ಬೈಕುಗಳಿಗೆ ಹಾನಿಯಾಗಿದೆ. 7 ಮನೆಗಳ ಮೇಲೆ ಕಲ್ಲು ತೂರಾಟವಾಗಿತ್ತು. ಅರ್ಧ ಗಂಟೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗಲಭೆ ಸಂಬಂಧ ರಾಗಿಗುಡ್ಡ ಪ್ರದೇಶದಲ್ಲಿ ಅಷ್ಟೆ ಕಲ್ಲುತೂರಾಟ ನಡೆದಿದೆ. ಶಿವಮೊಗ್ಗ ನಗರದ ಬೇರೆ ಯಾವ ಪ್ರದೇಶ ಕೂಡಾ ಗಲಭೆ ಪೀಡಿತವಾಗಿಲ್ಲ. ಗಲಭೆ ನಡೆದು ಕೇವಲ ಅರ್ಧ ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಮಾಧ್ಯಮಗಳಲ್ಲಿ ಬಂದಂತೆ ಶಿವಮೊಗ್ಗದಲ್ಲಿ ಯಾವುದೇ ‘ಕೊತಕೊತ, ಧಗಧಗ’ ಇಲ್ಲ ಎಂದು ತಿಳಿಸಿದ್ದಾರೆ.