ಹೊಸದಿಲ್ಲಿ: “ಭಾರತೀಯ ಚುನಾವಣ ಆಯೋಗ ಬಿಡುಗಡೆಗೊಳಿಸಿರುವ ಮತದಾನದ ದತ್ತಾಂಶಗಳಲ್ಲಿ ಲೋಪಗಳು ಕಂಡುಬರುತ್ತಿದ್ದು, ಈ ಬಗ್ಗೆ ಎಲ್ಲರೂ ಧ್ವನಿಯೆತ್ತಬೇಕು’ ಎಂದು ಇಂಡಿಯಾ ಒಕ್ಕೂಟದ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದಿದ್ದಾರೆ.
ಚುನಾವಣ ಆಯೋಗವು ಯಾವುದೇ ಒತ್ತಡವಿಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ನಾವು ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ದತ್ತಾಂಶಗಳ ಕುರಿತಾದ ಯಾವುದೇ ಲೋಪಗಳನ್ನು ಪ್ರಶ್ನಿಸಲು ಸಜ್ಜುಗೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಚುನಾವಣ ಆಯೋಗ ಬಿಡುಗಡೆಗೊಳಿಸಿ ರುವ ಅಂಕಿ-ಅಂಶಗಳಲ್ಲಿನ ಲೋಪಗಳು ಹಾಗೂ ನೋಂದಾಯಿತ ಮತದಾರರನ್ನು ಪ್ರಕಟಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮೊದಲ ಎರಡು ಹಂತದ ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ಮತದಾನಗಳು ಈಗಾಗಲೇ ಬಿಜೆಪಿಗರನ್ನು ಹತಾಶಗೊಳಿಸಿವೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಗೊಂದಲಕ್ಕೊಳಗಾಗಿದ್ದರೆ. ಅಧಿಕಾರದ ಅಮಲಿನಲ್ಲಿರುವ ಅವರು ಕುರ್ಚಿ ಉಳಿಸಿಕೊಳ್ಳಲು ಏನು ಬೇಕಿದ್ದರೂ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.