ಹುಬ್ಬಳ್ಳಿ (ಮೇ.4): ಪ್ರಜ್ವಲ್ ರೇವಣ್ಣ ಅವರಿಗೆ ಈಗ ಲುಕ್ಔಟ್ ನೋಟಿಸ್ ಕೊಟ್ಟಿದ್ದಾರೆ. ಮೊದಲೇ ಎಫ್ಐಆರ್ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ. 21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್ಐಆರ್ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದರು.
ಪ್ರಜ್ವಲ್ ಸಹೋದರ ಪೆನ್ಡ್ರೈವ್ಗೆ ಸಂಬಂಧಿಸಿದಂತೆ ನನ್ನನ್ನು ಭೇಟಿ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಆಗ ಯಾಕೆ ತಕ್ಷಣ ಕ್ರಮಕೈಗೊಳ್ಳಲಿಲ್ಲ? ಈ ಪ್ರಕರಣ ಗಂಭೀರ ಸ್ವರೂಪದ್ದು ಎಂದು ಗೊತ್ತಿದ್ದರೂ ಆರಾಮವಾಗಿ ಮಲಗಿ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಾ? ವೀಸಾ, ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್(ರಾಜತಾಂತ್ರಿಕ ಪಾಸ್ಪೋರ್ಟ್) ಕೊಟ್ಟಿದ್ದೀರಾ ಎಂದು ಹೇಳುತ್ತಿದ್ದೀರಾ. ನಾಚಿಕೆ, ಮಾನ-ಮರ್ಯಾದೆ ಇದ್ದವರು ಈ ರೀತಿ ಮಾತನಾಡುವುದಿಲ್ಲ. ಯಾಕೆಂದರೆ ಯಾರೇ ಒಬ್ಬ ವ್ಯಕ್ತಿ ಸಂಸದನಾಗಿ ಆಯ್ಕೆಯಾದ ಮೇಲೆ ಮೂರ್ನಾಲ್ಕು ದಿನಗಳಲ್ಲಿ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ಸಿಗುತ್ತದೆ ಎಂದು ತಿಳಿಸಿದರು.