ಪ್ರಜ್ವಲ್‌ ವಿದೇಶಕ್ಕೆ ಹೋಗುವುದರ ಹಿಂದೆ ಸಿದ್ದರಾಮಯ್ಯ ಕೈವಾಡ: ಪ್ರಲ್ಹಾದ್ ಜೋಶಿ ಆರೋಪ

ಹುಬ್ಬಳ್ಳಿ (ಮೇ.4): ಪ್ರಜ್ವಲ್‌ ರೇವಣ್ಣ ಅವರಿಗೆ ಈಗ ಲುಕ್‌ಔಟ್‌ ನೋಟಿಸ್‌ ಕೊಟ್ಟಿದ್ದಾರೆ. ಮೊದಲೇ ಎಫ್‌ಐಆರ್‌ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್‌, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್​ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ. 21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್‌ಐಆರ್​ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದರು.

ಪ್ರಜ್ವಲ್ ಸಹೋದರ ಪೆನ್‌ಡ್ರೈವ್​ಗೆ ಸಂಬಂಧಿಸಿದಂತೆ ನನ್ನನ್ನು ಭೇಟಿ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಆಗ ಯಾಕೆ ತಕ್ಷಣ ಕ್ರಮಕೈಗೊಳ್ಳಲಿಲ್ಲ? ಈ ಪ್ರಕರಣ ಗಂಭೀರ ಸ್ವರೂಪದ್ದು ಎಂದು ಗೊತ್ತಿದ್ದರೂ ಆರಾಮವಾಗಿ ಮಲಗಿ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಾ? ವೀಸಾ, ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌(ರಾಜತಾಂತ್ರಿಕ ಪಾಸ್‌ಪೋರ್ಟ್‌) ಕೊಟ್ಟಿದ್ದೀರಾ ಎಂದು ಹೇಳುತ್ತಿದ್ದೀರಾ. ನಾಚಿಕೆ, ಮಾನ-ಮರ್ಯಾದೆ ಇದ್ದವರು ಈ ರೀತಿ ಮಾತನಾಡುವುದಿಲ್ಲ. ಯಾಕೆಂದರೆ ಯಾರೇ ಒಬ್ಬ ವ್ಯಕ್ತಿ ಸಂಸದನಾಗಿ ಆಯ್ಕೆಯಾದ ಮೇಲೆ ಮೂರ್‍ನಾಲ್ಕು ದಿನಗಳಲ್ಲಿ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ಸಿಗುತ್ತದೆ ಎಂದು ತಿಳಿಸಿದರು.

Latest Indian news

Popular Stories