ಕಲಬುರಗಿ : ಗ್ಯಾರಂಟಿ ಯೋಜನೆಗಳಿಗೆ 38,000 ಕೋಟಿ ರೂ. ವೆಚ್ಚ ತಗುಲಿದರು ಕೂಡಾ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ. ಏಕೆಂದರೆ, ನಮಗೆ ಜನಪರ ಕಾಳಜಿ ಇದೆ, ಗ್ರಾಮೀಣ ಅಭಿವೃದ್ದಿಯ ತುಡಿತವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕಮರವಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಿಂದ ಬಲರಾಮ ಚೌಕ್ ವರೆಗೆ PMGSY ಯೋಜನೆಯಡಿಯಲ್ಲಿ ₹ 446 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ಹಾಗೂ PWD ವತಿಯಿಂದ ವಾಡಿ – ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರ ತಾಂಡವರೆಗೆ ₹ 200 ಲಕ್ಷದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ದುಡ್ಡುಕೊಟ್ಟರೆ ಚುನಾವಣೆ ನಡೆಯುವುದಿಲ್ಲ. ಅಭಿವೃದ್ದಿಯೇ ಇಲ್ಲಿ ಪ್ರಮುಖವಾಗುತ್ತದೆ ಎಂದು ನೀವೆಲ್ಲ ಮೂರನೆಯ ಬಾರಿ ತೋರಿಸಿಕೊಟ್ಟಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿ ಸಚಿವನೂ ಆಗಿದ್ದೇನೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸಲು ಬದ್ದವಾಗಿದ್ದೇನೆ ಎಂದರು.
ಕಮರವಾಡಿ ಗ್ರಾಮದ ಸೋಮಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ರೂಪುರೇಷೆ ಮಾಡಲಾಗಿದ್ದು, ಅಭಿವೃದ್ದಿಯೇ ನನ್ನ ಮೂಲ ಮಂತ್ರವಾಗಿದೆ ಎಂದು ತಿಳಿಸಿದ್ದಾರೆ.