ಮಡಿಕೇರಿ ರಾಜರ ಗದ್ದುಗೆ ಜಾಗದ ಸರ್ವೆ

ಮಡಿಕೇರಿ ಜೂ.೫ : ಒತ್ತುವರಿಯಾಗಿರುವ ಮಡಿಕೇರಿಯ ರಾಜರ ಗದ್ದುಗೆ ಜಾಗದ ಸರ್ವೆ ನಡೆಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಮಡಿಕೇರಿ ತಹಶೀಲ್ದಾರರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಸರ್ವೇ ಕಾರ್ಯ ನಡೆಯಿತು.
ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಯಿಸೀನ್, ಬಷೀರ್ ಹಾಗೂ ಮನ್ಸೂರ್ ಅವರುಗಳು ಮೊದಲು ಗದ್ದುಗೆಯ ಗಡಿಯನ್ನು ಸರ್ವೇ ಮೂಲಕ ಗುರುತಿಸುವ ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಒತ್ತುವರಿ ವಿಚಾರ ಬೆಳಕಿಗೆ ಬರಲಿದೆ ಎಂದು ತಹಶೀಲ್ದಾರ್ ಮಹೇಶ್ ಅವರಿಗೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈಗ ಗಡಿ ಗುರುತಿನ ಸರ್ವೆ ನಡೆಸಲಾಗುತ್ತಿದೆ. ಬಳಿಕ ಕಂದಾಯ ಇಲಾಖೆಯ ನಕ್ಷೆಯಲ್ಲಿ ಸರ್ವೇ ಮಾಡಲಾದ ಪ್ರದೇಶವನ್ನು ಹೊಂದಿಸಲಾಗುತ್ತದೆ. ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಮಹೇಶ್, ಹೈಕೋರ್ಟ್ ನಿರ್ದೇಶನದಂತೆ ೬ ವಾರಗಳ ಒಳಗೆ ಸರ್ವೇ ನಡೆಸಿ ವರದಿ ನೀಡಬೇಕಿತ್ತು. ಆದರೆ ನಗರ ಸಭೆ ಚುನಾವಣಾ ನೀತಿ ಸಂಹಿತೆ, ಕೊರೊನಾ ಮತ್ತಿತ್ತರ ಕಾರಣಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಸರ್ವೇ ನಂಬರ್ ೩೦/೧ರ ೧೯.೮೮ ಎಕರೆ ಪ್ರದೇಶದ ಗಡಿ ಗುರುತಿಸಿ ವಾಸ್ತವಾಂಶದ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆ. ನ್ಯಾಯಾಲಯದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸ್ಥಳದಲ್ಲಿದ್ದ ಕೊಡಗು ಜಿಲ್ಲಾ ವೀರಶೈವ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಸಾಂಬಶಿವ ಮಾತನಾಡಿ, ಹೈಕೋರ್ಟ್ ನಿರ್ದೇಶನದಂತೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ದಾಖಲೆಗಳ ಪ್ರಕಾರ ೧೯.೮೮ ಎಕರೆ ಪ್ರದೇಶ ಗದ್ದುಗೆಗೆ ಸೇರಿದ್ದಾಗಿದೆ. ಆದರೆ ಇದರಲ್ಲಿ ಎಷು ಒತ್ತುವರಿಯಾಗಿ ಅಲ್ಲಿ ಎಷ್ಟು ಜನರು ನೆಲೆಸಿದ್ದಾರೆ ಎಂಬುದು ಸರ್ವೇಯಿಂದ ಗೊತ್ತಾಗಲಿದೆ ಎಂದು ಹೇಳಿದರು. ಹೈಕೋರ್ಟ್ ಆದೇಶದ ಪ್ರಕಾರ ಒತ್ತುವರಿದಾರರಿಗೆ ಪುನರ್ವಸತಿ ಕಲಿಸಬೇಕು, ಸ್ಮಾರಕಕ್ಕೆ ತೊಂದರೆ ಆಗದ ರೀತಿಯಲ್ಲಿ ಸಂರಕ್ಷಣೆಯೂ ಆಗಬೇಕು. ಇದು ಅರ್ಜಿದಾರರು ಮತ್ತು ವೀರಶೈವ ಮಹಾ ಸಭಾದ ಒತ್ತಾಸೆಯೂ ಆಗಿದೆ ಎಂದು ಸಾಂಬಶಿವ ಹೇಳಿದರು.

::: ಬಾಕ್ಸ್ :::

ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ, ಶನಿವಾರಸಂತೆಯ ಜೆ.ಎಸ್. ವಿರೂಪಾಕ್ಷಯ್ಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣ ಸಿರುವ ನ್ಯಾಯಾಲಯ ಮಡಿಕೇರಿ ತಹಶೀಲ್ದಾರರಿಗೆ ಸರ್ವೇಗೆ ನಿರ್ದೇಶನ ನೀಡಿದೆ.
::: ಬಾಕ್ಸ್ :::

ಗದ್ದುಗೆಯಲ್ಲಿ ಇರುವುದೇನು?:

ಕಂದಾಯ ಇಲಾಖೆಯ ಸರ್ವೆ ನಂಬರ್ ೩೦/೧ರಲ್ಲಿ ನೆಲೆ ನಿಂತಿರುವ ಮಡಿಕೇರಿ ರಾಜರ ಗದ್ದುಗೆ ಒಟ್ಟು ೧೯.೮೮ ಎಕರೆ ಪ್ರದೇಶದಷ್ಟು ವಿಸ್ತಾರವಾಗಿದೆ. ಈ ಪ್ರದೇಶದಲ್ಲಿ ಮಡಿಕೇರಿಯನ್ನು ಆಳಿದ ಲಿಂಗರಾಜ, ವೀರ ರಾಜ ಮತ್ತು ಆಸ್ಥಾನದ ರಾಜಗುರು ರುದ್ರ ಮುನಿಸ್ವಾಮಿ ಅವರುಗಳ ೩ ಗೋರಿಗಳಿವೆ. ಮಾತ್ರವಲ್ಲದೇ ರಾಜನ ವೀರ ಸೈನ್ಯಾಧಿಕಾರಿಗಳಾದ ಬಿದ್ದಂಡ ಬೊಪ್ಪು ಹಾಗೂ ಬಿದ್ದಂಡ ಸೋಮಯ್ಯ ಅವರ ಎರಡು ಗೋರಿಗಳಿವೆ. ಸಂಪೂರ್ಣ ಕಡೆಗಣನೆ ಮತ್ತು ನಿರ್ಲಕ್ಷö್ಯಕ್ಕೆ ತುತ್ತಾಗಿದ್ದ ಗದ್ದುಗೆಯನ್ನು ಕೆಲ ವರ್ಷಗಳ ಹಿಂದೆ ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರ(ಮೂಡಾ) ಮೂಲಕ ಅಭಿವೃದ್ದಿಪಡಿಸಲಾಗಿತ್ತು. ೩.೫ ಎಕರೆ ಪ್ರದೇಶವನ್ನು ಸಂರಕ್ಷಿಸಿ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲಾಗಿದ್ದರೂ, ಇಂದಿಗೂ ಸಂಪೂರ್ಣವಾಗಿ ಐತಿಹಾಸಿಕ ಸ್ಥಳವೆನ್ನುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗಿಲ್ಲ ಎನ್ನುವ ಆರೋಪ ಇದೆ. ಫೋಟೋ :: ಗದ್ದುಗೆ

Latest Indian news

Popular Stories