ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ: ದಿನೇಶ್ ಗುಂಡೂರಾವ್‌

ಬೆಂಗಳೂರು: ‘ಬಿಜೆಪಿ ಗ್ಯಾರಂಟಿಗೆ ಯಾವುದೇ ಬೆಲೆ ಇಲ್ಲ. ಆದರೆ, ಕಾಂಗ್ರೆಸ್‌ ನೀಡಿದ್ದ ಭರವಸೆಯಂತೆ ಎಲ್ಲ ಗ್ಯಾರಂಟಿಗಳನ್ನೂ ಈಡೇರಿಸಿದೆ. ಪ್ರತಿಯೊಂದು ಕುಟುಂಬಕ್ಕೂ ಅದರ ಪ್ರಯೋಜನ ಸಿಗುತ್ತಿದೆ. ನಮ್ಮ ಗ್ಯಾರಂಟಿಗಳು ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ವೈಖರಿ ಕಾಂಗ್ರೆಸ್‌ ಕೈ ಹಿಡಿಯುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಚುನಾವಣಾ ಬಾಂಡ್‌ ಮೂಲಕ ಕಾನೂನುಬದ್ಧ ಭ್ರಷ್ಟಾಚಾರ ನಡೆಸಿ ಬಿಜೆಪಿ ₹ 12 ಸಾವಿರ ಕೋಟಿಯನ್ನು ಲೂಟಿ ಮಾಡಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸಿಬಿಐ ಅಧಿಕಾರಿಗಳನ್ನು ಛೂ ಬಿಟ್ಟು, ‘ದುಡ್ಡು ಕೊಡದಿದ್ದರೆ ನಿಮ್ಮನ್ನು ಮುಗಿಸುತ್ತೇವೆ’ ಎಂದು ಹೆದರಿಸಿ ಪ್ರಕರಣ ದಾಖಲಿಸಿದ, ದುಡ್ಡು ಬಂದ ಬಳಿಕ ಪ್ರಕರಣ ಮುಚ್ಚಿಹಾಕಿದ ಪ್ರಕರಣಗಳು ಬಯಲಾಗಿವೆ’ ಎಂದರು. ಈ ಚುನಾವಣೆ ಸರಿಸಮಾನ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

‘ಪ್ರತಿ ಡಾಲರ್‌ ಎದುರು ರೂಪಾಯಿ ಬೆಲೆಯನ್ನು ₹ 45ಕ್ಕಿಳಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು. ಈಗ ಪ್ರತಿ ಡಾಲರ್‌ ಎದುರು ರೂಪಾಯಿ ಬೆಲೆ ₹ 83ಕ್ಕೆ ಏರಿದೆ. ಪೆಟ್ರೋಲ್ ದರ ಹೆಚ್ಚಳ, ಜಿಎಸ್‌ಟಿ ಹೇರುವ ಮೂಲಕ ಅಗತ್ಯ ವಸ್ತುಗಳ ದರ ಹೆಚ್ಚಳ, ಅಡುಗೆ ಅನಿಲ ದರ ಹೆಚ್ಚಳ ಮಾಡಿದ್ದು ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಏನು ಸಹಾಯ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

Latest Indian news

Popular Stories