ಶಿವಮೊಗ್ಗ :ರಾಜ್ಯ ಸರ್ಕಾರದ ಮಹತ್ವದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಸಿಎಂ ಸಿದ್ದರಾಮಯ್ಯ ನಾಳೆ ಚಾಲನೆ ನೀಡಲಿದ್ದು, ಫಲಾನುಭವಿಗಳಿಗೆ ಖಾತೆಗೆ ಮೊದಲ ತಿಂಗಳ ನಿರುದ್ಯೋಗ ಭತ್ಯೆ ಜಮಾ ಆಗಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ಶರಣ ಪ್ರಕಾಶ್ ಪಾಟೀಲ, 2023 ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ನಿರುದ್ಯೊಗ ಭತ್ಯೆ ನೀಡಲಾಗುವುದು.
ಹಾಗೂ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು ಉದ್ಯೋಗವನ್ನು ಒದಗಿಸಲು ಸಹಕರಿಸುವುದು ಮತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಪ್ರಸ್ತುತ 61,700 ಪದವಿ/ಡಿಪ್ಲೊಮಾ ಹೊಂದಿದ ಅಭ್ಯರ್ಥಿಗಳು ಈ ಯೋಜನೆಯಡಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ.