ಹಾಸನ: ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗೆ ವಿದ್ಯಾರ್ಥಿನಿಯೋರ್ವಳು ಉಚಿತ ಬಸ್ ಪ್ರಯಾಣದ ಟಿಕೆಟ್ ಪೋಣಿಸಿ ಮಾಡಿದ ಹಾರವನ್ನು ಹಾಕಿದ ಘಟನೆ ನಡೆದಿದೆ.
ಕಾನೂನು ವಿದ್ಯಾರ್ಥಿನಿ ಜಯಶ್ರೀ ಉಚಿತ ಬಸ್ ಪ್ರಯಾಣದ ಫಲಾನುಭವಿಯಾಗಿದ್ದು, ತಾನು ಕಾಲೇಜಿಗೆ ಹೋಗಲು ಪ್ರಯಾಣಿಸುತ್ತಿದ್ದ ಸರಕಾರಿ ಬಸ್ನ ಉಚಿತ ಪ್ರಯಾಣದ ಟಿಕೆಟ್ನ್ನು ಸಂಗ್ರಹಿಸಿಟ್ಟಿದ್ದಳು. ಸಿದ್ದರಾಮಯ್ಯ ಅರಸೀಕೆರೆಗೆ ಬರುವ ವಿಷಯ ತಿಳಿದು ಜಯಶ್ರೀ ಆ ಟಿಕೆಟ್ಗಳನ್ನು ಪೋಣಿಸಿ ಮಾಲೆ ಮಾಡಿ, ಸಿದ್ದರಾಮಯ್ಯ ರ ಕೊರಳಿಗೆ ಹಾಕಿದ್ದಾಳೆ.
‘’ನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ’’ ಎಂದು ಜಯಶ್ರೀ ಕೃತಜ್ಞತೆ ಯಿಂದ ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದಾಳೆ.
‘ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು’ ಎಂದು ಸಿದ್ದರಾಮಯ್ಯ ವಿದ್ಯಾರ್ಥಿನಿ ಜಯಶ್ರೀ ಯನ್ನು ಹರಸಿದ್ದಾರೆ.