ಉಡುಪಿ: ಕೇಂದ್ರ ಸರಕಾರದ ವತಿಯಿಂದ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಮಂಡಿಸಿರುವ 2022ರ ಈ ಬಜೆಟ್ ನಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ಯಾವುದೇ ರೀತಿಯ ಕಾಳಜಿ ತೋರಲಾಗಿಲ್ಲ, ಆರೋಗ್ಯ ಕ್ಷೇತ್ರಕ್ಕೆ ಯಾವುದೇ ರೀತಿಯ ಮಹತ್ವ ನೀಡಲಾಗಿಲ್ಲ ಹಾಗೂ ಸಣ್ಣ ಪುಟ್ಟ ಉದ್ದಿಮೆದಾರರು ಇದುವರೆಗೂ ಜಿಎಸ್ಟಿಯಂತಹ ತೆರಿಗೆ ಪದ್ಧತಿ ಜೊತೆಗೆ ಹೆಣಗಾಡುತ್ತಿರುವುದನ್ನು ತಪ್ಪಿಸಲು ಸರಕಾರಕ್ಕಿನ್ನೂ ಸಾಧ್ಯವಾಗಿಲ್ಲ. ಈ ಬಜೆಟ್ ನಲ್ಲಿಯೂ ಹಿಂದಿನ ವರ್ಷದಂತೆ ರೈತರನ್ನು ತೀರಾ ಕಡೆಗಣಿಸಲಾಗಿದೆ.
ಯಾವುದೇ ಕೊಡುಗೆಯನ್ನು ನೀಡದೆ ಮಧ್ಯಮ ವರ್ಗದವರನ್ನು ನಿರಾಶರಾಗುವಂತೆ ಮಾಡಿ, ತನ್ನ ಈ ಹಿಂದಿನ ಕಳಪೆ ಆರ್ಥಿಕ ನೀತಿಯನ್ನೇ ಕೇಂದ್ರ ಸರಕಾರ ಮುಂದುವರಿಸಿಕೊಂಡು ಹೋಗುತ್ತಿರುವುದು ಸಹ್ಯವಲ್ಲ. ಕೇವಲ ಚುನಾವಣಾ ಗೆಲ್ಲಲು ಮಾತ್ರ ನೀತಿಯನ್ನು ರೂಪಿಸುತ್ತಾ, ಪಕ್ಷದ ಪ್ರಚಾರಕ್ಕೆ ಮಾತ್ರ ಮಹತ್ವ ನೀಡುತ್ತಾ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುತ್ತಿರುವುದು ತೀರಾ ನಿರಾಶದಾಯಕ ಮತ್ತು ಕಳವಳಕಾರಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರು ಇವರು ಬಜೆಟ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.