ಬ್ರಹ್ಮಾವರದ ಬಳಿ ಕಂಡುಬಂದ ದನದ ದೇಹದ ಭಾಗಗಳ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಘಟಕ ಎಸ್ಪಿಗೆ ಮನವಿ ಮಾಡಿದೆ.
ಬ್ರಹ್ಮಾವರದ ಕುಂಜಾಲಿನ ಬಳಿ ಸತ್ತ ದನದ ಅವಯವಗಳು ಕಂಡುಬಂದಿರುವುದಾಗಿಯೂ ಹಾಗೂ ಇದನ್ನೇ ನೆಪವಾಗಿಸಿ ಕೊಂಡು ಸ್ಥಳದಲ್ಲಿ ಗೊಂದಲ ಹರಡುವ ಸಾಧ್ಯತೆ ಇರುದಾಗಿಯೂ ತಿಳಿದುಬಂದಿದೆ. ಇಂತಹ ಉದ್ರೇಕಕಾರಿ ಕೃತ್ಯವನ್ನು ಯಾರೇ ಮಾಡಿದ್ದರೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆಯ ವತಿಯಿಂದ ಕೂಲಂಕಷವಾಗಿ ಈ ಕೃತ್ಯದ “ಎಲ್ಲಾ ಮಗ್ಗುಲುಗಳ” ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಒಕ್ಕೂಟವು ವಿನಂತಿಸಿದೆ.
ಈ ಕೃತ್ಯವನ್ನು ಪರಿಸರದಲ್ಲಿ ಅಶಾಂತಿ ಮೂಡಿಸಲು ಮಾಡಲಾಗಿದೆಯೇ ?, ಕಾಡುಪ್ರಾಣಿಗಳಿಂದ ಆಗಿದೆಯೇ ?, ಯಾರದೇ ನಂಬಿಕೆಯನ್ನು ಘಾಸಿಗೊಳಿಸುವ ಉದ್ದೇಶದಿಂದ ಮಾಡಲಾಗಿದೆಯೇ ? ಅಥವಾ ಇನ್ನಾವುದೇ ಬೇರೆ ಉದ್ದೇಶ ಮಾಡಲಾಗಿದೆಯೇ ? ಎಂಬುದರ ಕುರಿತು ತನಿಖೆ ಮಾಡಿ ತಪ್ಪಿತಸ್ತರ ಚಹರೆಯನ್ನು ಅನಾವರಣ ಗೊಳಿಸಬೇಕಾಗಿ ನಮ್ಮ ಕೋರಿಕೆ. ಅದೇ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳು ಈ ಸನ್ನಿವೇಶದ ದುರ್ಲಾಭ ಪಡೆದು ಪರಿಸರದಲ್ಲಿ ಆಶಾಂತಿ ಸೃಷ್ಟಿಸದಂತೆ ಹಾಗೂ ಕೋಮುದ್ವೇಷ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತಮ್ಮಲ್ಲಿ ಮನವಿ ಮಾಡಿಕೊಂಡಿದೆ.
ಈ ಮುಸ್ಲಿಂ ನಿಯೋಗದಲ್ಲಿ ಮುಸ್ಲಿಂ ಒಕ್ಕೂಟದ ತಾಜುದ್ದೀನ್ ಇಬ್ರಾಹಿಂ ಬ್ರಹ್ಮಾವರ ಅಲ್ತಾಫ್ ಅಹಮ್ಮದ್ ಬ್ರಹ್ಮಾವರ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಶರ್ಪುದ್ದೀನ್ ಶೇಕ್. ಶಾಕಿರ್ ಎಮ್, ನೂರ್ ಜಾಮಿಯಾ ಮಸೀದಿ ಅಧ್ಯಕ್ಷ ಶಬೀರ್, ಸಲಾಮ್ ಸಾಹೇಬ್ ಸುಭಾನ್ ಹೊನ್ನಳ ಸುಜಿದ್ ಖಾನ್ ಹುಸೇನಾರ್ ಅರಿಪ್ ರಿಯಾಜ್ ಮುಂತಾದ ಪ್ರಮುಖರು ಹಾಜರಿದ್ದರು