ಉಡುಪಿ: ಬ್ಯಾಂಕ್ ಮೋಸ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ್ದರಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ.ಯಲ್ಲಿ ದೂರುದಾರರಾದ ಸುನಿಲ್ ಕುಮಾರ್ ಅವರು ನೀಡಿದ ಖಾಸಗಿ ದೂರಿನಲ್ಲಿ ತಿಳಿಸಿದಂತೆ, ಹಿರಿಯಡಕ ಕಾರಾಗೃಹದಲ್ಲಿ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧೀಕ್ಷಕರು ರಜೆಯಲ್ಲಿ ಊರಿಗೆ ತೆರಳಿದ್ದಾಗ ಈ ಪ್ರಕರಣದ ಆರೋಪಿ ಸುರೇಶ್ ಬಾಬು ಕಾರಾಗೃಹದ ಪ್ರಭಾರ ಅಧೀಕ್ಷಕರಾಗಿದ್ದರು.
ಈ ಹಿಂದೆ ಅಮಾನತಿನಲ್ಲಿದ್ದ ಮತ್ತೂಬ್ಬ ಆರೋಪಿ ಮಹಾದೇವ್ ಮಾರ್ಚ್ ತಿಂಗಳಿನ ಸುಳ್ಳು ಸ್ಪಷ್ಟನೆಯನ್ನೊಳಗೊಂಡ ವೇತನ ದೃಢೀಕರಣ ಪತ್ರ ಸಹಿತ ನೈಜ ದಾಖಲೆಯೆಂದು ಸೃಷ್ಟಿಸಿ ಹಿರಿಯಡಕದ ಎಸ್ಸಿಡಿಸಿಸಿ ಬ್ಯಾಂಕಿನಿಂದ 1 ಲ.ರೂ. ಸಾಲ ಪಡೆದು ಮರು ಪಾವತಿಸದೆ ಬ್ಯಾಂಕಿಗೆ ವಂಚಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣದ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದೀಪಾ ಅವರು ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ್ದರಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಚೇರ್ಕಾಡಿ ಅಖೀಲ್ ಬಿ. ಹೆಗ್ಡೆ ವಾದಿಸಿದ್ದರು.