ಕಾರವಾರ: ಅಹಿಂದ ಒಕ್ಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಬೆಂಬಲಿಸಲಾಗುತ್ತಿದೆ ಎಂದು ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ ಚೆನ್ನಯ್ಯ ಹೇಳಿದರು.
ಕಾರವಾರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ನೆರವಾಗುತ್ತಿದೆ. ಅವರ ಸರ್ಕಾರದ ಕಾರ್ಯಗಳು ಜನಪರವಾಗಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಊಟದ ಅಕ್ಕಿ ಜನರ ಕೈ ಹಿಡಿದಿವೆ. ಸಮಾನತೆಯ ಹರಿಕಾರ ಎಂದೇ ಸಿದ್ದರಾಮಯ್ಯ ನಾಡಿನಲ್ಲಿ ಪರಿಚಿತರು. ಗ್ಯಾರಂಟಿ ಗಳಿಂದ ನಾಡಿನ ಆರ್ಥಿಕ ಸ್ಥಿತಿಗತಿ ಸುಧಾರಿಸಿವೆ .ರೈತರು ಬರದ ನಡುವೆಯೂ ಒಂದು ಹೊತ್ತು ಊಟ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ನೆಮ್ಮದಿಯ ಉಸಿರು ಬಿಡುತ್ತಿದ್ದಾರೆ .ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿದೆ.
ಇವೆಲ್ಲದರ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುತ್ತಿದ್ದೇವೆ ಎಂದು ಚೆನ್ನಯ್ಯ ಹೇಳಿದರು.
ಅಧಿಕಾರ ಬದಲಾಗಬೇಕಾಗಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಅಧಿಕಾರಕ್ಕೆ ಬರಬೇಕು ಎಂದರು.
ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿರುವ ಅಂಜಲಿ ಅವರಿಗೆ ಗೆಲ್ಲಿಸಲು ಪಣ ತೊಟ್ಟಿದ್ದೇವೆ ಎಂದರು.
ಅಬ್ದುಲ್ ಕರೀಂ ಶೇಖ್ ಮಾತನಾಡಿ ಕಾಂಗ್ರೆಸ್ ಜನರ ಕೈ ಹಿಡಿದಿದೆ. ಸುಳ್ಳು ಭರವಸೆ ನೀಡುವುದಿಲ್ಲ. ಜನರಿಗೆ ಅತೀಯಾದ ತೆರಿಗೆ ಹಾಕಿ ಶೋಷಣೆ ಮಾಡುವುದಿಲ್ಲ ಎಂದರು.
ಮೋದಿಯವರು ಶಿರಸಿಗೆ ಬಂದಾಗ ನಮ್ಮ ನೆಲಕ್ಕೆ ಹೊಂದಾಣಿಕೆಯಾಗದ ಮಾತು ಆಡಿದರು .ಸುಲ್ತಾನರು, ನವಾಬರು ಲೂಟಿ ಮಾಡಿದ ವಿಷಯ ಹೇಳಿದರು. ಇತಿಹಾಸ ಹಾಗೂ ರಾಜಶಾಹಿ ಕಾಲದ ಸತ್ಯಗಳನ್ನು ಅವರು ತಮಗೆ ಬೇಕಾದಂತೆ ಹೇಳಬಾರದಿತ್ತು. ಜನರು ಸೌಹಾರ್ದತೆ ನೆಮ್ಮದಿಯಿಂದ ಬದುಕುವಾಗ , ಒಡಕಿನ ಮಾತಾಡಾಬಾರದಿತ್ತು ಎಂದರು.
ನಾವು ಅಹಿಂದ ಸಂಘಟನೆಯಿಂದ ಕಾಂಗ್ರೆಸ್ ಬೆಂಬಲಸುತ್ತೇವೆ ಹಾಗೂ ಅಹಿಂದ ಬಲಗೊಳಿಸುತ್ತೇವೆ ಎಂದರು .
ಧಾಕಪ್ಪ ಚೆನ್ನಯ್ಯ, ಯಲ್ಲಪ್ಪ ಭೋವಿವಡ್ಡರ್, ನಾಗೇಶ ನಾಯ್ಕ, ವಿನಾಯಕ ಚೆನ್ನಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
….