ನವದೆಹಲಿ : ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಿ ಹೊಸ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ಚರ್ಚೆಯಲ್ಲಿದೆ. ದಿ. 25 ರಂದು ರಾಷ್ಟಿçÃಯ ನಾಯಕರು ಈ ವಿಷಯ ಸ್ಪಷ್ಟಪಡಿಸುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರಹ್ಲಾದ್ ಜೋಶಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಈ ಬಗ್ಗೆ ತಮ್ಮೊಂದಿಗೆ ಯಾರೂ ಮಾತನಾಡಿಲ್ಲ. ಬಿಎಸ್ವೈ ಅವರಿಗೆ ರಾಜೀನಾಮೆ ನೀಡಲು ಕೇಳಿದ್ದಾರೋ ಇಲ್ಲವೋ ಎನ್ನುವುದೂ ತಿಳಿದಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿ ಹೈಕಮ್ಯಾಂಡ್ ಇಲ್ಲ, ರಾಷ್ಟ್ರೀಯ ನಾಯಕತ್ವ ಇದೆ ಅಷ್ಟೆ. ಕಾಲದಿಂದ ಕಾಲಕ್ಕೆ ಬೇರೆ ಬೇರೆ ನಾಯಕತ್ವ ಇದೆ. ರಾಜನಾಥ್ ಸಿಂಗ್ ಅವರಿದ್ದರು, ನಂತರ ನಿತಿನ್ ಗಡ್ಕರಿ ಬಂದರು. ಅವರ ನಂತರ ಅಮಿತ್ ಷಾ ನಾಯಕತ್ವ ವಹಿಸಿಕೊಂಡರೆ, ಈಗ ಜೆ.ಪಿ.ನಡ್ಡಾ ಇದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ವರಿಷ್ಠ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಇದ್ದಾರೆ. ಅವರು ನಿರ್ಧರಿಸುತ್ತಾರೆ’ ಎಂದು ಜೋಶಿ ಹೇಳಿದ್ದಾರೆ.
ಯಡಿಯೂರಪ್ಪ ಸ್ಥಾನವನ್ನು ನೀವು ಪಡೆಯಬಹುದು ಎನ್ನುವುದರ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್ ಜೋಶಿ, `ಆ ಬಗ್ಗೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಮಾಧ್ಯಮದವರು ಮಾತ್ರ ಅದನ್ನು ಚರ್ಚಿಸುತ್ತಿದ್ದಾರೆ ಎಂದರು.
ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಮುಖಂಡರ ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ಪ್ರಹ್ಲಾದ್ ಜೋಶಿ ಅವರ ಹೆಸರೂ ಸೇರಿದೆ.