ಬೀದರ ಏಪ್ರೀಲ್ ೧೨ (ಕ.ವಾ.): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಮುಲ್ತಾನಿ ಕಾಲೋನಿಯಲ್ಲಿ ಏಪ್ರಿಲ್ ೧೧ರಂದು ನಡೆದ ಕೋವಿಡ್-೧೯ ಲಸಿಕಾ ಉತ್ಸವಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಚಾಲನೆ ನೀಡಿದರು.
ಕೋವಿಡ್-೧೯ ಲಸಿಕಾ ಉತ್ಸವದ ಈ ಸಂದರ್ಭದಲ್ಲಿ ಮುಲ್ತಾನಿ ಕಾಲೋನಿಯಲ್ಲಿರುವ ಮನೆಗಳಿಗೆ ಭೇಟಿ ನೀಡಿ, ೪೫ ವರ್ಷ ಮೇಲ್ಪಟ್ಟ ಹಿರಿಯರನ್ನು ಕರೆತಂದು ಲಸಿಕೆ ಕೊಡಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಿಶೇಷವಾಗಿ ೪೫ ವರ್ಷ ಮೇಲ್ಪಟ್ಟ ಎಲ್ಲ ಹಿರಿಯರಿಗೂ ಈಗ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೋರೋನಾ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತಿದೆ. ಇದರ ಭಾಗವಾಗಿ ಮುಲ್ತಾನಿ ಕಾಲೊನಿಯಲ್ಲಿ ಕೋವಿಡ್ ಲಸಿಕಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ನಗರಸಭೆ ಮಾಜಿ ಸದಸ್ಯರುಗಳು ಮತ್ತು ಹಿರಿಯ ನಾಗರಿಕರು ಭಾಗಿಯಾಗಿ ನಾವು ಮೊದಲು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುತ್ತೇವೆ ಎಂದು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಈಗಾಗಲೇ ಕರೋನಾ ಎರಡನೇ ಅಲೆ ಪ್ರಾರಂಭವಾಗಿದೆ. ಒಂದು ದಿನಕ್ಕೆ ಕನಿಷ್ಟ ಎರಡು ನೂರಕ್ಕಿಂತ ಹೆಚ್ಚು ಪಾಜಿಟೀವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಲಸಿಕೆ ಅನ್ನುವಂತಹ ದೊಡ್ಡ ರಕ್ಷಕ ನಮ್ಮ ಬಳಿ ಇದೆ. ಹೀಗಾಗಿ ಲಸಿಕೆಯನ್ನು ಸ್ನೇಹಿತರು, ಬಂಧುಗಳು ಸೇರಿದಂತೆ ನಾವೆಲ್ಲರೂ ಪಡೆದುಕೊಳ್ಳಬೇಕು ಎಂದು ಕೋರಿದರು.
ಸ್ವಯಂ ಸ್ಫೂರ್ತಿಯಿಂದ ಲಸಿಕೆ ಪಡೆದರು: ನಗರಸಭೆ ಮಾಜಿ ಸದಸ್ಯರಾದ ನಿಸಾರ್ ಅಹಮದ್ ಅವರು ಇದೆ ಸಂದರ್ಭದಲ್ಲಿ ಸ್ವಯಂ ಸ್ಫೂರ್ತಿಯಿಂದ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಹಮ್ಮದ್ ದಸ್ತಗೀರ್ ಅವರು ಕೋವಿಡ್ ಲಸಿಕೆ ಪಡೆದುಕೊಳ್ಳುವ ವೇಳೆ ಚಪ್ಪಾಳೆ ತಟ್ಟಿ ಅಭಿನಂದಿಸಲಾಯಿತು. ತಾವುಗಳು ತಮ್ಮ ಮನೆಯಲ್ಲಿರುವ ಎಲ್ಲ ಹಿರಿಯರಿಗೆ ಲಸಿಕೆ ಕೊಡಿಸಬೇಕು. ಇನ್ನೊಬ್ಬರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ತಾವುಗಳು ತಮ್ಮ ಮನೆಯಲ್ಲಿನ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಕೊಡಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮಹಮ್ಮದ್ ದಸ್ತಗೀರ್ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರಡ್ಡಿ, ಆರ್ಸಿಎಚ್ ಅಧಿಕಾರಿ ಡಾ.ಮಹೇಶ ಬಿರಾದಾರ ಮತ್ತು ವೈದ್ಯಾಧಿಕಾರಿಗಳಾದ ಡಾ.ಖಾಶೆಂಪೂರಕರ ಹಾಗೂ ಇನ್ನೀತರ ವೈದ್ಯಕೀಯ ಸಿಬ್ಬಂದಿ ಮತ್ತು ಮುಲ್ತಾನಿ ಕಾಲೊನಿಯ ನಾಗರಿಕರು ಇದ್ದರು.