ಅವಿಸ್ಮರಣೀಯ ವಿಮೋಚನಾ ಹೋರಾಟ ಸ್ಮರಿಸಿದ ಸಚಿವರು

ಬೀದರ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಜಿಲ್ಲಾ ಪೊಲೀಸ್ ಫsರೇಡ್ ಮೈದಾನದಲ್ಲಿ
ಸೆಪ್ಟೆಂಬರ್ 17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಂದೇಶ ನೀಡಿದ ಪಶುಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದ ಅವೀಸ್ಮರಣೀಯ ಘಟನೆಗಳನ್ನು ನೆನಪಿಸಿದರು.
ಈ ಭಾಗದ ವಿಮೋಚನಾ ಹೋರಾಟದಲ್ಲಿ ಭಾಗಿಯಾಗಿ ಪ್ರಾಣ ತ್ಯಾಗ ಮಾಡಿದ ಹಲವಾರು ನಾಯಕರ ಹೆಸರಗಳನ್ನು ಹೇಳಿ ಅವರ ತ್ಯಾಗ, ಬಲಿದಾನವನ್ನು ಸಚಿವರು ಸ್ಮರಿಸಿದರು. ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪಿಸಿದರು. ಈ ಹೋರಾಟದಲ್ಲಿ ಹುತಾತ್ಮರಾದ ನಾಯಕರಿಗೆ ತಮ್ಮ ನಮನಗಳನ್ನು ಸಲ್ಲಿಸಿದರು.
ಸ್ವಾತಂತ್ರö್ಯ ಪೂರ್ವದಲ್ಲಿ ಈ ಭಾಗವು ಹೈದ್ರಾಬಾದ್ ನಿಜಾಮರ ಆಳ್ವಿಕೆಗೊಳಪಟ್ಟಿತ್ತು. ಈ ಭಾಗದ ವಿಮೋಚನೆಗಾಗಿ ಹೋರಾಟಗಳು ನಡೆದವು. ಈ ಹೋರಾಟದಲ್ಲಿ ಹಲವಾರು ನಾಯಕರು ಜೈಲು ಸೇರಿದರು. ಆಗಿನ ಕೇಂದ್ರ ಮಂತ್ರಿಗಳಾಗಿದ್ದ ಸರ್ದಾರ ವಲ್ಲಭಬಾಯಿ ಪಟೇಲರು ಸೇನಾ ಕಾರ್ಯಚರಣೆ ನಡೆಸಿದಾಗ ನಿಜಾಮ ಆಡಳಿತ ಕೊನೆಗೊಂಡು ಈ ಪ್ರದೇಶವು ಭಾರತ ಒಕ್ಕೂಟದ ಭಾಗವಾಯಿತು ಎಂದು ಸಚಿವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಿಸಲ್ಪಡುವ ಸೆ.17 ಭಾರತ ಮಾತೆಯ ಸೇವಕರಾಗಿರುವ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಜನ್ಮದಿನವೂ ಆಗಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಈ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳಿಗೆ ಹೃದಯಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುವುದಾಗಿ ಸಚಿವರು ತಿಳಿಸಿದರು.
ಸಮಾಜವು ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಕಲ್ಪವಾಗಿದೆ. ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬುದು ಮಾನ್ಯ ಪ್ರಧಾನಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಜನತೋದ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಈ ನಾಡಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಈ ದೇಶದ ಬೆನ್ನೆಲುಬು ಕೃಷಿಕನ ಪುತ್ರರಾಗಿದ್ದಾರೆ. ಸರ್ಕಾರವು ರೈತ ಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತಕ್ಕೆ ಅಭಿನಂದನೆ: ಕೋರೋನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಕೋವಿಡ್ ಮೂಲೋತ್ಪಾಟನೆ ಮಾಡಲು ಲಸೀಕಾರಣ ನಡೆಯುತ್ತಿದೆ. ಬೀದರ ಜಿಲ್ಲೆಯಲ್ಲಿ 11 ಲಕ್ಷ ಜನರು ಲಸಿಕೆ ಪಡೆದುಕೊಳ್ಳಲು ಕ್ರಮ ವಹಿಸಿದ ಜಿಲ್ಲಾಡಳಿತಕ್ಕೆ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಮುಕ್ತ ಜಿಲ್ಲೆಯಾಗಲಿ: ಬಾಕಿ ಉಳಿಸಿಕೊಂಡ ಎಲ್ಲರೂ ಕೂಡಲೆ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ತಡೆಗೆ ರಾಮಬಾಣವಾದ ಲಸಿಕೆ ಪಡೆದುಕೊಂಡಲ್ಲಿ ಬೀದರ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಶಾಸಕರಾದ ರಹಿಂ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ್ ಶಾಸಕರಾದ ವಿಜಯಸಿಂಗ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಬಾಬುವಾಲಿ (ನಿಂಗಪ್ಪ), ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ್ ಡಿ.ಎಲ್., ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಐಎಎಸ್ ಪ್ರೋಬೇಷನರಿ ಕೀರ್ತನಾ, ತಹಸೀಲ್ದಾರ ಶಕೀಲ್ ಹಾಗೂ ಇತರರು ಉಪಸ್ಥಿತರಿದ್ದರು.
ಧ್ವಜಾರೋಹಣದ ನಂತರ ಸಚಿವರು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕವಾಯತು ತುಕಡಿಗಳಿಂದ
ಗೌರವ ವಂದನೆ ಸ್ವೀಕರಿಸಿದರು. ಬಳಿಕ ನಡೆದ ಪಥ ಸಂಚಲನ ಆಕರ್ಷಕವಾಗಿತ್ತು.

Latest Indian news

Popular Stories