ವಿಜಯಪುರ : ಉಳುವವನೇ ಹೊಲದೊಡೆಯ ಎಂಬ ಯೋಜನೆ ಮೂಲಕ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಭೂಮಿಯನ್ನು ದಲಿತ ಬಂಧುಗಳಿಗೆ ಹಂಚಿಕೆ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಶ್ರೀಮಂತ ವರ್ಗದ ಪರ ನಿಂತಿದ್ದರೆ, ಬಂಗಾರದ ಚಮಚ ಇರಿಸಿಕೊಂಡು ಜನಿಸಿದ ರಾಹುಲ್ ಗಾಂಧಿ ಬಡವರ ಪರ ನಿಂತಿದ್ದಾರೆ, ರೈತರ ಆದಾಯ ದ್ವಿಗುಣ ಮಾಡುವ ಮಾತು ನೀಡಿದ್ದ ಮೋದಿಜಿ ಅವರು ಕಾಲುಭಾಗ ಸಹ ರೈತರ ಆದಾಯ ಏರಿಕೆ ಮಾಡಲಿಲ್ಲ, ಅಷ್ಟೇ ಅಲ್ಲದೇ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ ಎಂದರು.
ದಲಿತರಿಗೆ ನೀಡಲಾಗಿರುವ ಮೀಸಲಾತಿ ತೆಗೆಯುವ ವಿಚಾರವನ್ನು ಬಿಜೆಪಿಯಲ್ಲಿಯೇ ಇರುವ ದಲಿತ ಮುಖಂಡರು ಒಪ್ಪುವುದಿಲ್ಲ, ಡಾ.ಅಂಬೇಡ್ಕರ್ ಅವರ ಸಮಾಧಿಗೆ ಜಾಗ ನೀಡಲಿಲ್ಲ ಎಂಬ ತಪ್ಪು ಸಂದೇಶ ನೀಡಲು ಬಿಜೆಪಿ ಹೊರಟಿದೆ, ಡಾ.ಅಂಬೇಡ್ಕರ್ ಅವರ ಧರ್ಮಪತ್ನಿ ಅವರು ನಾಗಪುರದಲ್ಲಿ ಡಾ.ಅಂಬೇಡ್ಕರ್ ಅವರ ಅಂತಿಮ ಸಂಸ್ಕಾರವನ್ನು ನಾಗಪುರದಲ್ಲಿ ನೆರವೇರಿಸಲು ಅಧಿಕೃತ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದರು, ದಲಿತರ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಿ.ಟಿ. ರವಿ ಅವರಿಗೆ ಧರ್ಮಸೇನಾ ಸವಾಲು ಹಾಕಿದರು.
ಸುನೀಲ ಉಕ್ಕಲಿ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ, ಪೀರಪ್ಪ ನಡುವಿನಮನಿ, ಸುಭಾಸ ಗುಡಿಮನಿ, ವಸಂತ ಹೊನಮೋಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.