ಬೆಂಗಳೂರು, ಮಾ.27: ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯ, ಜಗಳಗಳು ಮತ್ತು ಪ್ರತ್ಯೇಕವಾಗಿ ವಾಸಿಸುವುದು ವಿಚ್ಛೇದನದ ಮೇಲ್ಮನವಿಯನ್ನು ಪರಿಗಣಿಸಲು ಸಾಕಷ್ಟು ಕಾರಣಗಳಲ್ಲ ಎಂದು ಹೈಕೋರ್ಟ್ ಹೇಳಿದೆ.
ನಗರದ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನಕ್ಕೆ ನೀಡಿದ್ದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದ್ದ ಪತಿ ವಿಚ್ಛೇದನ ಅರ್ಜಿಯನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ನ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ, “ದಂಪತಿಗಳ ನಡುವೆ ಹೊಂದಾಣಿಕೆ ಮಾಡಲು ಸಾಧ್ಯವಾಗದ ದೊಡ್ಡ ಅಂತರವಿದೆ ಮತ್ತು ಅವರು ಒಂಬತ್ತು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಗಳನ್ನು ಉಲ್ಲೇಖಿಸಿ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಆದ್ದರಿಂದ ವಿಚ್ಛೇದನಕ್ಕೆ ಅರ್ಹರಾಗಲು ಈ ಕಾರಣಗಳು ಸಾಕಾಗುವುದಿಲ್ಲ. ಈ ವಿಚ್ಛೇದನದ ತೀರ್ಪು ಸರಿಯಲ್ಲ. ಗಂಡ ಮತ್ತು ಹೆಂಡತಿಯ ಆರೋಪಗಳನ್ನು ಆಯಾ ಸಮಾಜಗಳ ಪದ್ಧತಿಗಳ ನಿರ್ದಿಷ್ಟ ಉಲ್ಲೇಖದೊಂದಿಗೆ ನೋಡಬೇಕು ಎಂದಿದೆ.