ಉಡುಪಿ: ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಯಾಗಿದೆ. ಇದೀಗ ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಕುರ್ಮಾ ರಾವ್ ಅವರನ್ನು ಭೇಟಿಯಾದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ ನಿಯೋಗ ಈ ಸಮಸ್ಯೆಯನ್ನು ಬಗೆಹರಿಸಿ ಕೂಡಲೇ ವಿದ್ಯಾರ್ಥಿನಿಯರನ್ನು ತರಗತಿಗೆ ಹಿಜಾಬ್’ನೊಂದಿಗೆ ತರಗತಿ ಪ್ರವೇಶ ನೀಡಲು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿಯೋಗ ಡಿಡಿಪಿಐ ಅವರನ್ನು ಭೇಟಿ ಮಾಡಿದ ನಿಯೋಗ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ವಿದ್ಯಾರ್ಥಿನಿಯರಿಗೆ ಶಿರ ವಸ್ತ್ರದೊಂದಿಗೆ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕು. ಅದರೊಂದಿಗೆ ಅವರ ಸಂವಿಧಾನ ಬದ್ಧ ಹಕ್ಕನ್ನು ಸಂರಕ್ಷಿಸಬೇಕೆಂದು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕುರ್ಮಾ ರಾವ್ ನಿಯೋಗದೊಂದಿಗೆ ಮಾತನಾಡಿ, ಇಂದು ಸಭೆಯಿದೆ. ಆ ಸಭೆಯಲ್ಲಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲಾಗುವುದೆಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿ.ಐ.ಓ ನಿಯೋಗದಲ್ಲಿ ಜಮೀಲಾ ಸದೀದಾ, ಕುಲ್ಸುಮ್ ಅಬುಬಕ್ಕರ್, ಅಮ್ನಾ, ರಿನಾಝ್ ಉಪಸ್ಥಿತರಿದ್ದರು.