ಕಾಸರಗೋಡು: ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ಗೆ ಕಾರು ಢಿಕ್ಕಿ ಹೊಡೆದು ಕಾರು ಚಾಲಕ ಸಹಿತ ಮೂವರು ಮೃತಪಟ್ಟ ಘಟನೆ ಮಂಜೇಶ್ವರದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ತ್ರಿಶ್ಶೂರು ಇರಿಂಞಾಲಕುಡ ನಿವಾಸಿಗಳಾದ ಶಿವಕುಮಾರ್ (54), ಶರತ್ ಮೆನನ್(23) ಹಾಗೂ ಸೌರವ್(15) ಮೃತಪಟ್ಟವರು. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಉಷಾ, ಜೊತೆಗಿದ್ದ ಶಿವದಾಸ್ ಮತ್ತು ಆ್ಯಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ.
ಕೇರಳದ ಚಟ್ಟಂಚಾಲ್ ನಲ್ಲಿ ಸಂಭವಿಸಿರುವ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಉಷಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಕುಂಜತ್ತೂರು ಬಳಿ ಈ ಘಟನೆ ಸಂಭವಿಸಿದೆ.
ಅಪಘಾತದ ಭೀಕರತೆಗೆ ನಜ್ಜುಗುಜ್ಜಾದ ಕಾರಿನಿಂದ ಹರಸಾಹಸಪಟ್ಟು ಗಾಯಾಳುಗಳನ್ನು ಹೊರತೆಗೆಯಲಾಯಿತು. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದವರು ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಮುಗಿಸಿ ಮರಳಿ ತ್ರಿಶಶೂರಿಗೆ ತೆರಳುತ್ತಿದ್ದರು.
ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.