ಕೊಡಗು :ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದೊಡ್ಡ ಗಾತ್ರದ ಮರದ ಕೊಂಬೆ ಮೈ ಮೇಲೆ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.ಇಂದು ಬೆಳಗ್ಗೆ ಸುಂಟಿಕೊಪ್ಪ ಸಮೀಪದ ಡಿ. ಪನ್ಯ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಬಪ್ಪಯ್ಯ ಎಂಬುವವರ ಪತ್ನಿ ಲಕ್ಷ್ಮಿ (46) ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಎಂದಿನಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಇವರ ತಲೆಯ ಮೇಲೆ ಬಲವಾಗಿ ಬಿದ್ದಿದೆ. ಅದರ ಹೊಡೆತಕ್ಕೆ ಗಂಭೀರವಾಗಿ ಗಾಯಗೊಂಡ ಲಕ್ಷ್ಮಿ ಅವರನ್ನು ಸುಂಟಿಕೊಪ್ಪ ಆಸ್ಪತ್ರೆಗೆ ಕರೆದೊಯ್ದು ಆರಂಭಿಕ ಚಿಕಿತ್ಸೆ ಕೊಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು.
ಆದರೆ ಆದಾಗಲೇ ಲಕ್ಮಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತರು ಪತಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.