ಮಂಗಳೂರು: ಚಿನ್ನಾಭರಣ ವ್ಯವಹಾರ ಕಂಪನಿಯ ವ್ಯವಸ್ಥಾಪಕರೊಬ್ಬರ ಮೈ ಮೇಲೆ ಪುಡಿ ಎರಚಿ ಕಳ್ಳತನ ಮಾಡಲಾದ ಬಗ್ಗೆ ವರದಿಯಾಗಿದೆ.
‘ಲಕ್ಷ್ಮಣ ಎಂಬುವವರು ಕೆಲಸ ಮುಗಿಸಿ ಕಂಪನಿ ಕಚೇರಿಗೆ ಬೀಗ ಹಾಕಿ ಸಂಜೆ ಮನೆಯತ್ತ ಹೊರಟಿದ್ದರು. ₹ 50 ಸಾವಿರ ನಗದು ಹಾಗೂ 70 ಗ್ರಾಂ ತೂಕದ ಚಿನ್ನಾಭರಣವನ್ನು ಬ್ಯಾಗ್ನಲ್ಲಿ ಇರಿಸಿಕೊಂಡು ಕಚೇರಿ ಎದುರಿನ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದ ಜಾಗಕ್ಕೆ ಹೋದ ಸಂದರ್ಭದಲ್ಲಿ ಹಿಂದಿನಿಂದ ಬಂದಿದ್ದ ಆರೋಪಿ, ಮೈ ಮೇಲೆ ಪುಡಿ ಎರಚಿದ ಕೂಡಲೆ ಅವರ ಮೈಯಲ್ಲಿ ಅಲರ್ಜಿ ಉಂಟಾಗಿ ಕೆರೆತ ಶುರುವಾಗಿತ್ತು. ನೋವು ತಡೆಯದ ದೂರುದಾರ, ಕಚೇರಿ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದರು. ಶೌಚಾಲಯದ ಹೊರಗೆ ಬ್ಯಾಗ್ ಇರಿಸಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಬ್ಯಾಗ್ ಕದ್ದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.