ಇಸ್ಲಾಮಾಬಾದ್: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಇನ್ನೊಂದೇ ವಾರದಲ್ಲಿ ಮನೆಗೆ ಬರಲಿದೆ. ಭಾರತ ಕೂಡ ಸೆಮಿಫೈನಲ್ಸ್ ಬಳಿಕ ಮನೆ ಕಡೆಗೆ ನಡೆಯಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನುಡಿದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ಕುರಿತು ಯುಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ನಾನು ಮೊದಲೇ ಹೇಳಿದ್ದೆ ಪಾಕಿಸ್ತಾನ ತಂಡ ಈ ವಾರ ವಾಪಸ್ ಬಂದುಬಿಡುತ್ತದೆ ಎಂದು. ಭಾರತ ತಂಡವೇನು ಈ ಬಾರಿ ಅಷ್ಟು ಬಲಿಷ್ಠವಾಗಿಲ್ಲ. ಸೆಮಿಫೈನಲ್ಸ್ ಸೋತು ತಾಯ್ನಾಡಿಗೆ ಹಿದಿರುಗುತ್ತದೆ ನೋಡಿ,” ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಶೊಯೇಬ್ ಅಖ್ತರ್ ಭಾರತ ತಂಡದ ಕುರಿತು ಹೇಳಿದ್ದಾರೆ.
ಭಾರತ ತಂಡ ಸದ್ಯ ಬ್ಯಾಕ್ ಟು ಬ್ಯಾಕ್ ಜಯದೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಅಕ್ಟೋಬರ್ 30ರಂದು ನಡೆಯಲಿರುವ ತನ್ನ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಪಾಯಕಾರಿ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ
ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಬೇಕಾದರೆ, ಭಾರತ ತಂಡ ತನ್ನ ಪಾಲಿನ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಬೇಕು. ಹಾಗೆಯೇ ಪಾಕಿಸ್ತಾನ ತಂಡ ಕೂಡ ತನ್ನ ಪಾಲಿನ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ತಲಾ ಎರಡು ಪಂದ್ಯಗಳನ್ನು ಸೋಲಬೇಕು. ಹೀಗಾದರೆ ಮಾತ್ರವೇ ಪಾಕಿಸ್ತಾನ ತಂಡಕ್ಕೆ ಮುಂದಿನ ಹಂತಕ್ಕೇರುವ ಅವಕಾಶ ಸಿಗಲಿದೆ.
ಟಿ20 ವಿಶ್ವಕಪ್ನಲ್ಲಿ ಭಾರತದ ಎದುರು ಮಂಡಿಯೂರಿದ ಪಾಕ್ ತಂಡ 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧವೂ ಸೋಲನ್ನು ಕಂಡಿದೆ. ಸತತ ಸೋಲಿನ ರುಚಿ ನೋಡಿದ ಪಾಕಿಸ್ತಾನ ಇದೀಗ ಅರ್ಹತಾ ಸುತ್ತಿನ ರ್ಯಾಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ.