ಬೆಂಗಳೂರು: ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ರಾಜ್ಯ ಕಾಂಗ್ರೆಸ್ ಘಟಕ ಬಸವರಾಜ ಬೊಮ್ಮಾಯಿ ಸರ್ಕಾರದ ಕಮಿಷನ್ ದಂಧೆಯ ಆರೋಪದ ವಿಚಾರದಲ್ಲಿ ಸಾಲು ಸಾಲು ಟ್ವೀಟ್ ಮಾಡಿದೆ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿರುವುದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಸೈಡ್ಲೈನ್ ಮಾಡಲು ಎಂದು ಕೆಪಿಸಿಸಿ ಆರೋಪಿಸಿದೆ.
ಪ್ರತಿ ಸರ್ಕಾರಿ ನೇಮಕಾತಿಯಲ್ಲಿ, ಪ್ರತಿ ಸರ್ಕಾರಿ ವರ್ಗಾವಣೆಯಲ್ಲಿ,ಪ್ರತಿ ಸರ್ಕಾರಿ ಗುತ್ತಿಗೆಯಲ್ಲಿ 40% ಕಮಿಷನ್ ಪಡೆದು, ಇಡೀ ರಾಜ್ಯವನ್ನ ಲೂಟಿ ಮಾಡಿ, ರಾಜ್ಯದ ಸಂಪನ್ಮೂಲಗಳನ್ನ ಗುಡುಸಿ ಗುಂಡಾಂತರ ಮಾಡಿದ ಆದಾಯದಲ್ಲಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವಿಯುವವರಿಗೆ, ಭಾರತ ಹಸಿವು ಸೂಚಂಕ್ಯದಲ್ಲಿ 117ನೇ ಸ್ಥಾನಕ್ಕೆ ಕುಸಿದಿರೋದು ಕಾಣೋದು ಹೇಗೆ?
ಕೇಂದ್ರ ಗೃಹಸಚಿವರು ಬಂದಿರುವುದು ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ, ಬದಲಾಗಿ ಜೆ.ಪಿ ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ! ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಆಗುಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡುತ್ತಿದ್ದಾರೆ. ಅವರ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ ಎಂದು ಕೆಪಿಸಿಸಿ ಲೇವಡಿ ಮಾಡಿದೆ.
ಅಮಿತ್ ಶಾ ಅವರೇ, ನಿಮ್ಮ ಕರ್ನಾಟಕದ ಭೇಟಿಯ ಅಜೆಂಡಾ ಏನು? ಪಿಎಸ್ ಐಪರೀಕ್ಷೆ ಅಕ್ರಮವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವುದೇ? ಬಿಟ್ ಕಾಯಿನ್ ಹಗರಣದ ತನಿಖೆಯನ್ನ ಚುರುಕುಗೊಳಿಸುವುದಕ್ಕಾ? ಕುಸಿದು ಕುಳಿತಿರುವ ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಸರಿಪಡಿಸುವುದಕ್ಕಾ? ಅಸಮರ್ಥ ಗೃಹಮಂತ್ರಿಯನ್ನು ಬದಲಿಸುವುದಕ್ಕಾ? ಅಥವಾ ಸಿಎಂ ಬದಲಾವಣೆಗಾ? ಎಂದು ಪ್ರಶ್ನಿಸಿದೆ.
ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಅವರ ಮುನ್ಸೂಚನೆ ನಿಜವೇ , ನಿಜವಲ್ಲ ಎಂದಾದರೆ, ಇತರ ಪಕ್ಷಗಳ ನಾಯಕರಿಗೆ ನೋಟಿಸ್ ಸಲಹೆ ಕೊಡುವ ತಾವು ಯತ್ನಾಳ್ ಅವರಿಗೆ ನೋಟಿಸ್ ಏಕೆ ನೀಡಿಲ್ಲ? ಬಿಜೆಪಿ ನಾಯಕತ್ವವಿಲ್ಲದೆ ಒದ್ದಾಡುವ ಸ್ಥಿತಿ ಬಂದಿದೆ, ಅದೆಷ್ಟೇ ಬದಲಾವಣೆಯ ಸರ್ಕಸ್ ಮಾಡಿದರೂ ನಾಯಕತ್ವ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.