ಉಡುಪಿ: ಜಿಲ್ಲಾದ್ಯಂತ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿತು.
ಅ.12ರ ಮುಂಜಾನೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ ತಾಲೂಕಿನಲ್ಲಿ 21.8 ಮಿ.ಮೀ., ಬ್ರಹ್ಮಾವರ 27 ಮಿ.ಮೀ., ಕಾಪು 38.8 ಮಿ.ಮೀ., ಕುಂದಾಪುರ 28 ಮಿ.ಮೀ., ಬೈಂದೂರು 27.9 ಮಿ.ಮೀ., ಕಾರ್ಕಳ 13.1 ಮಿ.ಮೀ., ಹೆಬ್ರಿ 18.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 23.7 ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾ|ನ ಕಸಬಾ ಗ್ರಾಮದ ಉದಯ ಅವರ ಮನೆ ಭಾಗಶಃ ಹಾನಿಯಾಗಿದೆ.
ಮಂಗಳವಾರ ಸಂಜೆ 4.30ರ ಬಳಿಕ ಭಾರೀ ಮಳೆ ಸುರಿದ ಕಾರಣ ಜನರು ಭಾರೀ ಸಂಕಷ್ಟ ಅನುಭವಿಸಿದರು. ಹಲವಾರು ಮಂದಿ ಆಟೋರಿಕ್ಷಾಗಳನ್ನು ಏರಿ ಮನೆಗೆ ತೆರಳಿದರು. ಕೆಲವೆಡೆ ಸಿಡಿಲು, ಮಿಂಚಿನಿಂದ ವಿದ್ಯುತ್ ವ್ಯತ್ಯಯವಾಯಿತು. ನಗರದ ವಿವಿಧ ಭಾಗಗಳಲ್ಲಿ ಕೃತಕ ನೆರೆ ಉಂಟಾಯಿತು. ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಸುರಿಯುತ್ತಿರುವ ಮಳೆಗೆ 55.68 ಲ.ರೂ. ನಷ್ಟ ಉಂಟಾಗಿದೆ. 45 ವಿದ್ಯುತ್ ಕಂಬ, 37 ಟ್ರಾನ್ಸ್ ಫಾರ್ಮರ್, 3.61 ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.